
ಉದಯವಾಹಿನಿ ಮಸ್ಕಿ : ತಾಲ್ಲೂಕಿನ ಮಲ್ಲದಗುಡ್ಡದ ಹತ್ತಿರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಗ್ರಾಮೀಣ ಗೋದಾಮು ಅನ್ನು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಸೋಮವಾರ ಉದ್ಘಾಟಿಸಿದರು.ನಂತರ ಮಾತನಾಡಿ, ಸ್ಥಳೀಯ ರೈತರ ಅನುಕೂಲ ಕ್ಕಾಗಿ ಉದ್ಯೋಗ ಖಾತ್ರಿ ಯೋಜನಯಡಿ ಗೋದಾಮು ನಿರ್ಮಿಸಲಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಅನುಕೂಲವಾಗಲಿದೆ. ಮಾರುಕಟ್ಟೆಯಲ್ಲಿ ದರ ಏರಿಳಿತ ಗಮನಿಸಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ. ಸ್ಥಳೀಯರು ಸಮಿತಿ ರಚಿಸಿಕೊಂಡು, ಗೋದಾಮು ನಿರ್ವಹಣೆಗೆ ಮುತುವರ್ಜಿ ವಹಿಸಬೇಕು ಎಂದರು. ಮಸ್ಕಿ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಕೇವಲ ಕೂಲಿಕಾರರಿಗೆ ಕೆಲಸ ನೀಡುವುದಕ್ಕೆ ಸೀಮಿತವಾಗಿಲ್ಲ. ಶಾಲೆಗಳಲ್ಲಿ ಆಟದ ಮೈದಾನ ಅಭಿವೃದ್ಧಿ, ಶೌಚಾಲಯ, ಅಡುಗೆ ಕೋಣೆ, ಅಂಗನವಾಡಿ, ಬಾಸ್ಕೆಟ್ಬಾಲ್ ಅಂಕಣ ನಿರ್ಮಿಸಲಾಗುತ್ತಿದೆ. ಅದೇ ರೀತಿ ರೈತರ ಅನುಕೂಲಕ್ಕಾಗಿ ಎರೆಹುಳು ತೊಟ್ಟಿ, ದನದ ಶೆಡ್, ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ, ಗ್ರಾಮೀಣ ಗೋದಾಮು ನಿರ್ಮಿಸುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮಲ್ಲದಗುಡ್ಡ ಗ್ರಾಪಂ ಅಧ್ಯಕ್ಷರು , ಉಪಾಧ್ಯಕ್ಷರು, ಸದಸ್ಯರು, ಮಸ್ಕಿ ತಾಪಂ ತಾಂತ್ರಿಕ ಸಂಯೋಜಕರಾದ ಶಿವಲಿಂಗಯ್ಯ ಹಿರೇಮಠ, ಪಿಡಿಒ ಬಸವಲಿಂಗಯ್ಯ, ತಾಂತ್ರಿಕ ಸಹಾಯಕ ಅಭಿಯಂತರ ಪ್ರದೀಪ್, ಗ್ರಾಪಂ ಸಿಬ್ಬಂದಿ, ಸ್ಥಳೀಯ ಮುಖಂಡರು ಇದ್ದರು.
