ಉದಯವಾಹಿನಿ,ತಿ.ನರಸೀಪುರ: ತಮಿಳುನಾಡಿಗೆ ಕೃಷ್ಣರಾಜ ಸಾಗರ-ಕಬಿನಿ ಜಲಾಶಯಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ಬೈಕ್ ಜಾಥಾ ನಡೆಸಿತು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ನೆರೆದಿದ್ದ ನೂರಾರು ರೈತ ಸಂಘದ ಮುಖಂಡರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ನಂತರ ತಿ. ನರಸೀಪುರದಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ಗಳಲ್ಲಿ ಜಾಥಾ ಹೊರಟು ಮನವಿ ಸಲ್ಲಿಸಿದರು.
ಜಾಥಾ ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ,ಸರ್ಕಾರ ತಮಿಳುನಾಡಿಗೆ ಏಕಾಏಕಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು.ಕಾವೇರಿ -ಕಪಿಲಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಬೇಕು.
ಈ ಭಾಗದ ರೈತರು ಬಿತ್ತನೆ ಕಾರ್ಯ ಮುಗಿಸಿದ್ದು,ಸರ್ಕಾರ ರೈತರ ಬೇಸಾಯಕ್ಕೆ ನೀರು ಬಿಡದೆ ಇರುವುದರಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ರೈತರ ಬೆಳೆ ನಷ್ಟದ ಹೊಣೆ ಹೊರಬೇಕು.ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.
