ಉದಯವಾಹಿನಿ, ಸೈದಾಪುರ: ರೈತರು ತಮ್ಮ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಿಸುವ ಮುಂಜಾಗ್ರತ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ, ಅವುಗಳ ಆರೋಗ್ಯವನ್ನು ರಕ್ಷಿಸಿ ಎಂದು ಹಿರಿಯ ಪಶು ವೈದ್ಯಕೀಯ ಪರೀಕ್ಷಕ ತಾಯಪ್ಪ ಅಭಿಪ್ರಾಯಪಟ್ಟರು.
ಸಮೀಪದ ಮಾಧ್ವಾರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರವನ್ನು ನಿಯಂತ್ರಿಸುವ ಮುಂಜಾಗ್ರತ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 4 ವರ್ಷ ಮೇಲ್ಪಟ್ಟ ಕರುಗಳಿಗೆ, ಕುರಿ, ಮೇಕೆ, ಹಸು, ಎತ್ತು, ಎಮ್ಮೆಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ನಿಯಂತ್ರಣ ಮತ್ತು ನಿರ್ಮೂಲನೆಗೆ ಸಕಾಲದಲ್ಲಿ ಲಸಿಕೆಯನ್ನು ಹಾಕಿಸಿ ರೋಗ ನಿಯಂತ್ರಣ ಮಾಡದಿದ್ದರೆ ಜಾನುವಾರುಗಳು ಮೃತಪಡುವ ಸಂಭವವಿರುತ್ತದೆ. ಇದರಿಂದ ರೈತರಿಗೆ ತುಂಬಾ ನಷ್ಟ ಉಂಟಾಗುತ್ತದೆ. ಆದ್ದರಿಂದ ಈ ಬಾರಿ ಇಲಾಖೆಯು ಖುದ್ದಾಗಿ ರೈತರ ಮನೆ, ಹೊಲಗಳಿಗೆ ಪಶು ವೈದ್ಯರು ಭೇಟಿ ನೀಡಿ ರಾಸುಗಳಿಗೆ ಸಾಮೂಹಿಕವಾಗಿ ಮುಂಜಾಗ್ರತ ಲಸಿಕೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
