ಉದಯವಾಹಿನಿ ಮುದ್ದೇಬಿಹಾಳ : ಗ್ರಾಮ ಪಂಚಾಯ್ತಿವೊಂದರ ಕಂಪೌಂಡ್ ಕಾಮಗಾರಿ ಬಿಲ್ ಬಿಡುಗಡೆಗೆ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪಿಡಿಒ ಹಾಗೂ ತಾಂತ್ರಿಕ ಸಹಾಯಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಪಟ್ಟಣದ ತಾ.ಪಂ ಕಚೇರಿಯಲ್ಲಿ ಶನಿವಾರ ನಡೆದಿದೆ.ತಾಲೂಕಿನ ತಂಗಡಗಿ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ತಾಳಿಕೋಟಿ ಹಾಗೂ ಉದ್ಯೋಗ ಖಾತ್ರಿ ಯೋಜನೆ ತಾಂತ್ರಿಕ ಸಹಾಯಕ ಪ್ರಸನ್ನಕುಮಾರ ಶೆಟ್ಟರ ಅವರೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕು ಬಿದ್ದವರು.ತಂಗಡಗಿ ಗ್ರಾ.ಪಂಗೆ ಸಂಬಂಧಿಸಿದಂತೆ ಸನ್ 2020-21 ನೇ ಸಾಲಿನಲ್ಲಿ ಮಾಡಿದ ಕಂಪೌಂಡ್ ಕಾಮಗಾರಿಯ ಬಿಲ್ 7.50 ಲಕ್ಷ ರೂ.ಮಂಜೂರಾತಿ ಮಾಡಲು ಶೇ.5 ರಂತೆ 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು.ದೂರುದಾರನಿಂದ 30 ಸಾವಿರ ರೂ.ಲಂಚ ಪಡೆದುಕೊಳ್ಳುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಆನಂದ ಡೋಣಿ,ಆನಂದ ಟಕ್ಕನ್ನವರ ದಾಳಿ ನಡೆಸಿದ್ದರು.ಲೊಕಾಯುಕ್ತ ಕಚೇರಿ ಸಿಬ್ಬಂದಿ ಸಂತೋಷ ಅಮರಖೇಡ,ಎಸ್.ಎಸ್.ಮುಂಜೆ,ಆಯ್.ಎಸ್.ಕನ್ನೂರ, ಎ.ಜಿ.ಪಡಶೆಟ್ಟಿ,ಎ.ಎಚ್.ಗೋಲಗೇರಿ,ಎ.ಎ.ಮುಲ್ಲಾ,ಎಂ.ಎ.ಸಲಗೊಂಡ ಇದ್ದರು.

