
ಉದಯವಾಹಿನಿ, ಮಸ್ಕಿ: 150ಎ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲಿಕರಣ ಹಾಗೂ ಪಟ್ಟಣದ ಡಿವೈಡರ್ ಕಾಮಗಾರಿಯಲ್ಲಿ ಅಂದಾಜು ಪತ್ರಿಕೆ ನಿಯಮ ಉಲ್ಲಂಘಿಸಿ ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಿರಿಯ ಅಭಿಯಂತರರು, ಸಹಾಯಕ ಅಭಿಯಂತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆ ಒಕ್ಕೂಟದ ಮುಖಂಡ ಆರ್.ಕೆ ನಾಯಕ ಅವರು ಒತ್ತಾಯಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರಗತಿಪರ ಸಂಘಟನೆ ಒಕ್ಕೂಟದ ಮುಖಂಡರು ನಡೆಸಿದ ಅನಿರ್ಧಿಷ್ಟ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದರು. ಕಸಬಾ ಲಿಂಗಸ್ಗೂರುದಿಂದ ಮುದಬಾಳ ಕ್ರಾಸ್ ವರೆಗೆ ರಸ್ತೆ ಅಗಲಿಕರಣ, ಪಟ್ಟಣದ ಬಸವೇಶ್ವರ ವೃತ್ತದಿಂದ ಮುದಗಲ್ಲ ಕ್ರಾಸ್ ವರೆಗೆ ಕೈಗೊಂಡಿರುವ ಡಿವೈಡರ್ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಕಾಮಗಾರಿಯಲ್ಲಿ ಬಳಸಿರುವ ವಸ್ತು ಗುಣಮಟ್ಟದಿಂದ ಕೂಡಿಲ್ಲ, ಕಾಮಗಾರಿ ಬಾಳಿಕೆ ಬರುವುದಿಲ್ಲ, ಕಳಪೆ ಕಾಮಗಾರಿ ತೆರವುಗೊಳಿಸಿ ಪುನಃ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಕಿರಿಯ ಹಾಗೂ ಸಹಾಯಕ ಅಭಿಯಂತರರಿಗೆ ಅನೇಕ ಭಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳ ನಡೆಯನ್ನು ಖಂಡಿಸಿ ಅನಿರ್ದಿಷ್ಟ ಧರಣಿ ಕೈಗೊಂಡಿದ್ದೇವೆ ಎಂದರು, ಇನ್ನೂ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಕಾಮಗಾರಿ ನಡುವೆ ಸೇತುವೆ ಕಾಮಗಾರಿ ಸಹ ತೀರಾ ಕಳಪೆ ಮಟ್ಟದಿಂದ ಕೂಡಿದೆ, ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡದೇ ಆಫೀಸ್ ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. 150ಎ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲಿಕರಣ, ಪಟ್ಟಣದ ಡಿವೈಡರ್ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಳಪೆ ಕಾಮಗಾರಿಯಲ್ಲಿ ಶಾಮೀಲು ಆಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು. ತಹಶೀಲ್ದಾರ ಅರಮನೆ ಸುಧಾ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆ ಒಕ್ಕೂಟದ ಮುಖಂಡ ಅಶೋಕ ಮುರಾರಿ, ದುರ್ಗರಾಜ ವಟಗಲ್ಲ, ವಿಜಯಕುಮಾರ ಬಡಿಗೇರ, ಕಿರಣ ಮುರಾರಿ, ಬಸವರಾಜ ಉದ್ಬಾಳ, ಸಿದ್ದು ಮುರಾರಿ, ಮಲ್ಲಿಕ್ ಕೋಠಾರಿ, ಸೇರಿದಂತೆ ಇನ್ನಿತರಿದ್ದರು.
