ಉದಯವಾಹಿನಿ, ಮೈಸೂರು: ಮನೆಯಲ್ಲಿ ಅಕ್ರಮವಾಗಿ ಆನೆಯ ದವಡೆ ಹಲ್ಲನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಮೈಸೂರಿನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.ಮೈಸೂರಿನ ಉದಯಗಿರಿ ನಿವಾಸಿ ಅಭಿರಾಮ್ ಸುಂದರನ್ (70) ಬಂಧಿತ ಆರೋಪಿ. ಇವರು ಆನೆಯೊಂದರ ದವಡೆ ಹಲ್ಲನ್ನು ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು.ಹುಲಿ ಉಗುರು ಹೊಂದಿದ್ದಾರೆಂಬ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡವು ಅಭಿರಾಮ್ ಸುಂದರನ್ ಮನೆಯನ್ನು ಬುಧವಾರ ಸಂಜೆ ಶೋಧ ನಡೆಸಿದಾಗ ಕೊಠಡಿಯೊಂದರಲ್ಲಿ ಬಚ್ಚಿಟ್ಟಿದ್ದ ಆನೆಯ ದವಡೆಯ ಹಲ್ಲು ಸಿಕ್ಕಿದೆ. ಈ ಆನೆ ದವಡೆ ಹಲ್ಲು ಎರಡು ಕೆ.ಜಿ ತೂಕ, 17 ಸೆಂ.ಮೀ ಉದ್ದ, 9 ಸೆಂ.ಮಿ ಅಗಲವಿದೆ. ಮದ್ಯ ವಯಸ್ಕ ಆನೆಯ ದವಡೆ ಹಲ್ಲು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಬಂಧಿತ ವ್ಯಕ್ತಿ ಹಲವು ವರ್ಷದ ಹಿಂದೆ ಎಚ್.ಡಿ. ಕೋಟೆಯಲ್ಲಿ ವ್ಯಕ್ತಿಯೊಬ್ಬರಿಂದ ಪಡೆದಿದ್ದಾಗಿ ಹೇಳಿದ್ದಾರೆ.
ಹೀಗಾಗಿ, ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಡಿಸಿಎಫ್ ಡಾ.ಕೆ.ಎನ್. ಬಸವರಾಜು ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಎನ್. ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಆರ್ಎಫ್ಒಗಳಾದ ಕೆ. ಸುರೇಂದ್ರ, ಧನ್ಯಶ್ರೀ, ಡಿಆರ್ಎಫ್ಗಳಾದ ಮೋಹನ್, ಚಂದ್ರಶೇಖರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.
