ಉದಯವಾಹಿನಿ, ಹುಬ್ಬಳ್ಳಿ: ಇಲ್ಲಿನ ಕೋಟಲಿಂಗನಗರದ ನಿಖಿಲ್ ‌ಕುಂದಗೋಳ (28) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಠಾಣೆಯ ಇನ್​ಸ್ಪೆಕ್ಟರ್​, ಎಎಸ್​ಐ ಸೇರಿ ಎಂಟು ಜನರ ವಿರುದ್ಧ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಯು.ಹೆಚ್. ಸಾತೇನಹಳ್ಳಿ, ಎಎಸ್‌ಐ ಜಯಶ್ರೀ ಛಲವಾದಿ, ಮೃತನ ಪತ್ನಿ ಪ್ರೀತಿ ಪೊಗಳಾಪುರ, ಧನರಾಜ್, ಮಂಜುಳಾ, ಆನಂದಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ನಿಖಿಲ್ ಅವರ ತಾಯಿ ಗೀತಾ ಕುಂದಗೋಳ ದೂರು ನೀಡಿದ್ದಾರೆ.
ನಿಖಿಲ್ ಸಾವಿಗೆ ಅವರ ಪತ್ನಿ ಕುಟುಂಬದವರು ಹಾಗೂ ಕೇಶ್ವಾಪುರ ಠಾಣೆ ಇನ್​ಸ್ಪೆಕ್ಟರ್ ಹಾಗೂ ಎಎಸ್‌ಐ ಕಾರಣ, ಗುರುವಾರ ತಡರಾತ್ರಿ ಮಗನಿಗೆ ನೋಟಿಸ್ ನೀಡಿ ದೌರ್ಜನ್ಯ ಎಸಗಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.ಎಫ್​ಐಆರ್​ನಲ್ಲಿ‌ ಏನಿದೆ?: ನಿಖಿಲ್ ಹಾಗೂ ಪ್ರೀತಿ ಕುಟುಂಬದವರ ಒಪ್ಪಿಗೆ ಮೇರೆಗೆ 2022 ರ ಡಿಸೆಂಬರ್​ನಲ್ಲಿ‌ ಇಬ್ಬರಿಗೆ ಮದುವೆ ಮಾಡಲಾಗಿತ್ತು. ಸ್ವಲ್ಪ ಸಮಯದ ನಂತರ ಯುವತಿಗೆ ಅನೈತಿಕ ಸಂಬಂಧ ಇದೆ ಎಂದು ನಿಖಿಲ್ ಹಾಗೂ ಆತನ​ ಮನೆಯವರು ಆರೋಪಿಸಿದ್ದರು. ಈ ಹಿನ್ನೆಲೆ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಕೂಡ ಬೆಳೆದಿತ್ತು. ಈ ಗಲಾಟೆ ನಂತರ ಶುಕ್ರವಾರ ನಿಖಿಲ್​ನನ್ನು ಪೊಲೀಸ್​ ಠಾಣೆಗೆ ಕರೆಸಿ ಮದುವೆ ಸಮಯದಲ್ಲಿ ನೀಡಿದ್ದ 2 ಲಕ್ಷ ರೂ. ನಗದು, ಪಾತ್ರೆ ಸಾಮಗ್ರಿ ಹಾಗೂ ಚಿನ್ನಾಭರಣವನ್ನು ನೀಡಬೇಕು.‌ ಇಲ್ಲದಿದ್ದರೆ ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!