ಉದಯವಾಹಿನಿ, ನವದೆಹಲಿ : ನಿಷೇಧಿತ ಸಿಖ್ ಫಾರ್ ಜಸ್ಟಿಸ್ (ಎಸ್ ಎಫ್ ಜೆ) ಸಂಸ್ಥಾಪಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ನ ಹೊಸ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ಇದೇ ನವೆಂಬರ್ ೧೯ ರಂದು (ವಿಶ್ವಕಪ್ ಕ್ರಿಕೆಟ್ ಫೈನಲ್ ದಿನ) ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾನೆ. ಒಂದು ವೇಳೆ ಈ ದಿನದಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದರೆ ನಿಮ್ಮ ಜೀವಕ್ಕೆ ತೊಂದರೆ ಎಂದು ಗುಡುಗಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, “ನಾವು ಸಿಖ್ ಜನರನ್ನು ನವೆಂಬರ್ ೧೯ ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಕೇಳುತ್ತಿದ್ದೇವೆ. ಅಂದು ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ ೧೯ ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ. ಆ ದಿನದಂದು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐ) ಮುಚ್ಚಲಾಗುವುದು. ಅದರ ಹೆಸರನ್ನು ಬದಲಾಯಿಸಲಾಗುವುದು. ಈ ವಿಮಾನ ನಿಲ್ದಾಣದ ಹೆಸರು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದು ಇಡುತ್ತೇವೆ” ಎಂದು ಹೇಳಿದ್ದಾನೆ.
