ಉದಯವಾಹಿನಿ, ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೈಯಪ್ಪನ ಹಳ್ಳಿ ಠಾಣೆ ಪೊಲೀಸರು ನರ್ಸ್ ಮಂಜುಳ ಎಂಬಾಕೆಯನ್ನು ಬಂಧಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾಗಿರುವ ಸಂಖ್ಯೆ 10ಕ್ಕೆ ಏರಿದೆ.
ಚಾಮರಾಜನಗರದ ನಿವಾಸಿ, ನರ್ಸ್ ಮಂಜುಳಾ ಈ ಹಿಂದೆ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ಅಲ್ಲಿ ಕೆಲಸವನ್ನು ಬಿಟ್ಟು ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಇದೀಗ ಮಂಜುಳಾಳನ್ನು ಬಲೆಗೆ ಬೀಳಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಭ್ರೂಣವನ್ನು ಹೇಗೆ ಹತ್ಯೆ ಮಾಡುತ್ತಿದ್ದರು ಎಂಬ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದನ್ನು ತಿಳಿದು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಆರು ತಿಂಗಳ ಗರ್ಭಿಣಿಗೆ ಮಾತ್ರೆಯನ್ನು ಕೊಟ್ಟು ಬಳಿಕ ಡೆಲಿವರಿ ಮಾದರಿಯಲ್ಲಿ ಭ್ರೂಣವನ್ನು ಆರೋಪಿಗಳು ಹೊರತೆಗೆಯುತ್ತಿದ್ದರು ಎಂಬುದು ಗೊತ್ತಾಗಿದೆ.
ಸಾಮಾನ್ಯವಾಗಿ 14ರಿಂದ 18 ವಾರಗಳ ಭ್ರೂಣದಲ್ಲಿ ಲಿಂಗ ಪತ್ತೆಯಾಗುತ್ತದೆ. ಸ್ಕ್ಯಾನಿಂಗ್ ವೇಳೆ ಲಿಂಗ ಪತ್ತೆಯಾದ ನಂತರ ಗರ್ಭಿಣಿಗೆ ರಕ್ತ ಪರೀಕ್ಷೆ ಮಾಡಿ ನಂತರ ಭ್ರೂಣವನ್ನು ಹೊರತೆಗೆದು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಗರ್ಭಿಣಿಗೆ ರಕ್ತ ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಮಾಡಲು ಆರೋಪಿಗಳಾದ ಮಂಜುಳಾ ಹಾಗೂ ಚಂದನ್ ಕೆಲಸ ಆರಂಭಿಸುತ್ತಿದ್ದರು.
