ಉದಯವಾಹಿನಿ, ಬೆಳಗಾವಿ: ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಅವರು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಬಗ್ಗೆ ಯತ್ನಾಳ್ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.ಮುಸ್ಲಿಂರನ್ನು ತುಚ್ಛವಾಗಿ ಕಾಣುತ್ತಾ, ಅವರು ವಿರುದ್ಧ ಹೇಳಿಕೆ ನೀಡುತ್ತಾ ಚುನಾವಣೆಯಲ್ಲಿ ಅವರು ಗೆದ್ದಂತಹವರು. ಒಬ್ಬ ರಾಜಕಾರಣಿ ಆದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಇನ್ನು ಮೌಲ್ವಿಗಳ ಸವಾಲನ್ನು ಯತ್ನಾಳ್ ಸ್ವೀಕರಿಸುತ್ತಾನಾ ಎಂದು ಏಕವಚನದಲ್ಲೇ ಹರಿಹಾಯ್ದಿದರು.
ಯತ್ನಾಳ್ ನಾನೇ ಮಹಾನ್ ನಾಯಕ ಎಂಬಂತೆ ಮಾತನಾಡುತ್ತಾರೆ. ಸ್ವಪಕ್ಷೀಯರ ವಿರುದ್ದವೇ ಹೇಳಿಕೆಗಳನ್ನು ನೀಡುತ್ತಾರೆ. ಅವರ ಪಕ್ಷದ ಹೈಕಮಾಂಡ್ ಆಯ್ಕೆಗಳನ್ನು ಒಪ್ಪಲು ತಯಾರಿಲ್ಲ. ಬಿಜೆಪಿಯಲ್ಲಿ ಇಂತಹ ನಾಯಕರನ್ನು ಬೆಳೆಸಿದರೆ ಬಿಜೆಪಿ ಸರ್ವನಾಶವಾಗಲಿದೆ. ಹಾಗಾಗಿ ಬಿಜೆಪಿಯವರು ಯತ್ನಾಳ್ನನ್ನು ಪಕ್ಷದಿಂದ ಉಚ್ಛಾಟಿಸಿದರೆ ಒಳ್ಳೆಯದು ಎಂದು ಅವರು ಹೇಳಿದರು.
