ಉದಯವಾಹಿನಿ, ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದ ವ್ಯಕ್ತಿಗೆ ನ್ಯಾಯಾಲಯ ೭ ವರ್ಷ ಜೈಲು ೩೦ ಸಾವಿರ ರೂ. ದಂಡ ವಿಧಿಸಿದೆ. ಸೋಮಶೇಖರ್ ಭೀಮಪ್ಪ ಕುಂಕುಮಗಾರ ಎಂಬಾತನಿಗೆ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೭ ವರ್ಷ ಜೈಲು ಹಾಗೂ ೩೦ ಸಾವಿರ ರೂ. ದಂಡ ವಿಧಿಸಿದೆ
ಹಿರೇಕೆರೂರು ತಾಲೂಕಿನ ಭೋಗಾವಿ ಗ್ರಾಮದ ಸೋಮಶೇಖರ್ ಭೀಮಪ್ಪ ಕುಂಕುಮಗಾರ ಮೂಲತಃ ಕುಂಕುಮಗಾರ (ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಸಹ, ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಹನುಮಂತಪ್ಪ ತಳವಾರನ ಸಹಕಾರ ಪಡೆದು ಚನ್ನದಾಸರ ಎಂದು ಜಾತಿ ಕಾಲಂನಲ್ಲಿ ನಮೂದಿಸಿದ್ದ.
ಬಳಿಕ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ, ಹಿರೇಕೆರೂರು ತಹಸೀಲ್ದಾರರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದ. ಈ ನಕಲಿ ದಾಖಲಾತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾನೆಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರ ನಡಾವಳಿಯಿಂದ ಮತ್ತು ತನಿಖೆಯಿಂದ ಆರೋಪ ದೃಢಪಟ್ಟಿದೆ.
