ಉದಯವಾಹಿನಿ: ಭಾಲ್ಕಿ: ತಾಲ್ಲೂಕಿನ ತರನಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ರೇವಪ್ಪಯ್ಯಾ ಜಾತ್ರೆ ನಿಮಿತ್ತ ಅಪಾರ ಭಕ್ತ ಸಮೂಹದ ಮಧ್ಯೆ ಸಂಭ್ರಮದ ರಥೋತ್ಸವ ಜರುಗಿತು. ಹುಡುಗಿಯ ವೀರೂಪಾಕ್ಷ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥವನ್ನು ಎಳೆಯಲು ಭಕ್ತರು ನಾ ಮುಂದು, ತಾ ಮುಂದು ಎಂದು ಉತ್ಸಾಹ ತೋರಿ ಭಕ್ತಿ ಮೆರೆದರು.
ರಥೋತ್ಸವಕ್ಕೂ ಮುನ್ನ ರೇವಪ್ಪಯ್ಯಾ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆ ರಥವಿದ್ದ ಸರ್ಕಾರಿ ಶಾಲೆಯ ಆವರಣದ ವರೆಗೆ ಜರುಗಿತು.
ಪಲ್ಲಕ್ಕಿ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು ಡಿಜೆ ಸೌಂಡ್ ನಲ್ಲಿ ಮೊಳಗಿದ ಭಕ್ತಿ, ಮನೋರಂಜನೆ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಾತ್ರಿ 12 ಗಂಟೆಗೆ ಆರಂಭವಾದ ಋಣಾನುಬಂಧ ನಾಟಕ ಸಭಿಕರ ಮನ ಸೆಳೆಯಿತು.
ಗ್ರಾಮ ಸುತ್ತಮುತ್ತಲಿನ ಹಳ್ಳಿಗಳಾದ ಹಲಬರ್ಗಾ, ತೇಗಂಪೂರ, ನೇಳಗಿ, ಸಿದ್ದೇಶ್ವರ, ಸಿದ್ದೇಶ್ವರ ವಾಡಿ, ಜ್ಯಾಂತಿ, ಕಣಜಿ ಸೇರಿದಂತೆ ಇತರೆಡೆಯಿಂದ ಆಗಮಿಸಿದ್ದ ಜನರು ರೇವಪ್ಪಯ್ಯಾ ಶಿವಶರಣರ ದರುಶನ, ಪ್ರಸಾದ ಪಡೆದು ಪುನೀತರಾದರು.
