ಉದಯವಾಹಿನಿ, ವಿಜಯಪುರ: ಹೈಕಮಾಂಡ್ ಬುಲಾವ್ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಗೆ ತೆರಳಿ ಕೇದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಬಂದಿದ್ದಾರೆ.
ದೆಹಲಿಯಿಂದ ಆಗಮಿಸಿರುವ ಯತ್ನಾಳ್, ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ನಾಯಕರ ಕರೆ ಮೇರೆಗೆ ದೆಹಲಿಗೆ ಹೋಗಿದ್ದೆ.ರಾಷ್ಟ್ರಾಧ್ಯಕ್ಷರ ಭೇಟಿಗೂ ಮುನ್ನ ಅರುಣ್ ಸಿಂಗ್ ಹಾಗೂ ರಾಧಾಮೋಹನ್ ಅಗರವಾಲ್ ಭೇಟಿಯಾಗಲು ಹೇಳಿದ್ದರು. ಅದರಂತೆ ಅವರಿಬ್ಬರನ್ನು ಭೇಟಿಯಾಗಿ ಚರ್ಚಿಸಿ ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಭೇಟಿಯಾಗಿದ್ದೇನೆ. ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಈ ವೇಳೆ ಎಲ್ಲಾ ವಿಚಾರಗಳನ್ನು ಕೇಂದ್ರ ನಾಯಕರ ಮುಂದೆ ಹೇಳಿದ್ದೇನೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿದ್ಸುವುದಾಗಿ ಭರವಸೆ ನೀಡಿದ್ದಾರೆ. ಏನೇ ಹೇಳುವುದಿದ್ದರೂ ನನಗೆ ನೇರವಾಗಿ ಹೇಳಿ ಎಂದು ನಡ್ಡಾ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.
ಎರಡು ದಿನ ಮುಂಚಿತವಾಗಿ ಮಾಹಿತಿ ನೀಡಿ. ನಾನು ಭೇಟಿಯಾಗಲು ಸಮಯ ನೀಡುತ್ತೇನೆ ಎಂದಿದ್ದಾರೆ. ನಿಮ್ಮ ಭೇಟಿಗೆ ಅಪಾಯಿಂಟ್ ಮೆಂಟ್ ಸಿಗಲ್ಲ, ಬರಿ ಯಡಿಯೂರಪ್ಪ, ವಿಜಯೇಂದ್ರಗೆ ಮಾತ್ರ ಸಿಗುತ್ತದೆ ಎಂದು ಹೇಳಿದ್ದೇನೆ. ಎರಡು ದಿನದಲ್ಲೇ ಭೇಟಿಗೆ ಅವಕಾಶ ಕೊಡುತ್ತೇನೆ. ಏನೆ ಸಮಸ್ಯೆಯಿದ್ದರೂ ನೇರವಾಗಿ ತಿಳಿಸಿ, ಯಾರ ಮುಲಾಜಿಗೂ ಒಳಗಾಗದೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.
