ಉದಯವಾಹಿನಿ, ಬೆಂಗಳೂರು: ರಾಮಮಂದಿರ ಉದ್ಘಾಟನೆ ದಿನ ಸಮೀಪವಾಗುತ್ತಿರುವ ಬೆನ್ನಲ್ಲೇ ರಾಜ್ಯದಿಂದ ಅಯೋಧ್ಯೆಗೆ ಹೊರಡಲು ತಯಾರಾದ ರಾಮನ ಭಕ್ತರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಹಲವು ಭಾಗಗಳಿಂದ ಅಯೋಧ್ಯೆಗೆ ಹೆಚ್ಚುವರಿ ರೈಲುಗಳನ್ನು ಬಿಡಲು ಇಲಾಖೆ ಚಿಂತನೆ ನಡೆಸುತ್ತಿದೆ.
ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಇಡೀ ಹಿಂದೂ ಸಮುದಾಯ ತುದಿಗಾಲಲ್ಲಿ ನಿಂತಿದೆ. ಇದಕ್ಕಾಗಿ ರಾಜ್ಯದಿಂದ ಅಯೋಧ್ಯೆಗೆ ತೆರಳಲು ಹಲವಾರು ಜನ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಗೆ ಹೊರಟ ರಾಮನ ಭಕ್ತರಿಗಾಗಿ ನೈರುತ್ಯ ರೈಲ್ವೆ ಇಲಾಖೆ ರಾಜ್ಯದಿಂದ ಹೆಚ್ಚುವರಿ ರೈಲನ್ನು ಬಿಡಲು ತಯಾರಿ ನಡೆಸುತ್ತಿದೆ. ರಾಜ್ಯದಿಂದ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುವ ನಿರೀಕ್ಷೆ ಇದೆ. ಈ ಹಿಂದೆಯೇ ಬೇರೆ ಬೇರೆ ರಾಜ್ಯಗಳಿಂದ ಅಯೋಧ್ಯೆಗೆ ರೈಲುಗಳನ್ನು ಬಿಡುವುದಾಗಿ ಕೇಂದ್ರ ಇಲಾಖೆ ಹೇಳಿತ್ತು. ಅದೇ ರೀತಿ ರಾಜ್ಯದಿಂದಲೂ ಹೆಚ್ಚಿನ ಜನ ರಾಮಭಕ್ತರು ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ. ಈ ಹಿನ್ನಲೆ ರಾಜ್ಯದಿಂದ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ವಲಯ ಪ್ಲ್ಯಾನ್ ಮಾಡ್ತಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವ ನೈರುತ್ಯ ರೈಲ್ವೆ ವಲಯ, ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿದೆ. ಮುಂದಿನ ಮೂರ್ನಾಲ್ಕು ದಿನದ ಒಳಗೆ ಈ ಸಂಬಂಧ ಕೇಂದ್ರ ವಲಯ ಸೂಚನೆ ನೀಡುವ ಸಾಧ್ಯತೆ ಇದ್ದು, ಈ ಹಿನ್ನೆಲೆ ನೈರುತ್ಯ ವಲಯ ಕೂಡ ತಯಾರಿ ಆರಂಭಿಸಿದೆ.
