ಉದಯವಾಹಿನಿ, ಬೆಂಗಳೂರು: ನನ್ನನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಪಕ್ಷವು ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಳ್ಳೆಯತನಕ್ಕೆ, ಒಳ್ಳೆಯ ನಡವಳಿಕೆಗೆ ಸಹಾಯ ಆಗುತ್ತದೆ. ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ನಡವಳಿಕೆ, ಅವರ ತೀರ್ಮಾನ, ಭಾವನೆ ಸಕಾರಾತ್ಮಕವಾಗಿಯೇ ಇತ್ತು. ಎಲ್ಲವೂ ಸುಖಾಂತ್ಯವಾಗಿದೆ.ಕೆಲಸ ಮಾಡಿ ಬಳಿಕ ಮುಂದಿನದ್ದನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿರುವುದಾಗಿ ವಿವರಿಸಿದರು.
ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ. ಜತೆಗೆ ನನಗೆ 3 ಕಷ್ಟದ ಲೋಕಸಭಾ ಕ್ಷೇತ್ರ ಕೊಡಿ. ಯಾವುದೇ 3 ಕ್ಷೇತ್ರಗಳನ್ನು ಕೊಟ್ಟರೂ ಗಲ್ಲಿಸಿಕೊಂಡು ಬರುತ್ತೇನೆ. 28 ಕ್ಷೇತ್ರಗಳ ಪೈಕಿ 3 ಕ್ಷೇತ್ರ ವಹಿಸಿದರೆ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ನನ್ನ ಶ್ರಮ ಇದೆ ಎಂದರು. ನಾನು ಐದತ್ತು ನಿಮಿಷ ಚರ್ಚೆಗೆ ಅವಕಾಶ ಕೇಳಿದ್ದೆ. ಆದರೆ, ಅವರು ಅರ್ಧ ಗಂಟೆ ಸಮಯ ಕೊಟ್ಟರು. ಎಲ್ಲವನ್ನೂ ಅವರ ಗಮನಕ್ಕೆ ತಂದಿದ್ದೇನೆ. ಕೆಲಸ ಮಾಡಿ ಮುಂದೆ ತೀರ್ಮಾನ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. 28 ಲೋಕಸಭಾ ಕ್ಷೇತ್ರದಲ್ಲಿನ ಎಲ್ಲಾ ವಿವರ ನೀಡಿದ್ದೇನೆ ಎಂದು ತಿಳಿಸಿದರು.
ನಾನು ನನ್ನ ಮಗನಿಗಾಗಿ ಏನೂ ಕೇಳಿಲ್ಲ, ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ. ಆದ್ದರಿಂದ ನನ್ನನ್ನು ಗಮನದಲ್ಲಿಟ್ಟು ಆಯ್ಕೆಗೆ ಪರಿಗಣಿಸಿ ಎಂದು ಹೇಳಿದ್ದೇನೆ. ಹೈಕಮಾಂಡ್ ಅವರ ಅಂತರಾಳದ ಮಾತು ಕೇಳಿದೆ. ರಾಷ್ಟ್ರೀಯ ನಾಯಕರ ಅಂತರಾಳದಲ್ಲಿ ಇಷ್ಟು ಒಳ್ಳೆಯ ಮನಸ್ಸಿದೆ ಎನ್ನುವುದು ತಿಳಿಯತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅರುಣ್ ಸೋಮಣ್ಣಗೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸ್ಥಾನ ಕೈ ತಪ್ಪಿದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ವರಿಷ್ಠರ ಬಳಿ ಏನನ್ನೂ ಕೇಳಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷರಾಗಿ ರಾಮಮೂರ್ತಿ ಆಗಿದ್ದಾರೆ. ಅವರು ನಮ್ಮ ಹುಡುಗನೇ. ಎರಡು ಬಾರಿ ಕಾಪೆರ್ರೇಟರ್ ಆಗಿದ್ದಾನೆ. ಈಗ ಶಾಸಕ ಕೂಡ ಆಗಿದ್ದಾನೆ ಒಳ್ಳೆಯದಾಗಲಿ.ರಾಜ್ಯಾಧ್ಯಕ್ಷರು ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
