ಉದಯವಾಹಿನಿ, ಬೆಂಗಳೂರು: ಜಾನೂರು ಕಲೆಯಲ್ಲಿ ತೆಂಗಿನ ಗರಿ ಹಾಗೂ ಬಾಳೆ ದಿಂಡಿನಲ್ಲಿ ಅರಳಿದ ರಾಮಮಂದಿರ, ರಾಮನ ಪ್ರತಿಕೃತಿ, ಕಪ್ಪು ಸುಂದರಿಗೆ ತೊಡಿಸಿದ್ದ ತೆಂಗಿನ ಉಡುಗೆ, ತರಕಾರಿಗಳಿಂದ ಮಾಡಿದ ವಿಶೇಷ ಕೆತ್ತನೆ ನೋಡುಗರ ಮನಸೂರೆಗೊಂಡವು.ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ, ಇಕೆಬಾನ ಹೂಗಳ ಪ್ರದರ್ಶನವೂ ಚಿತ್ತಾಕರ್ಷಕವಾಗಿತ್ತು.
ವೈವಿಧ್ಯಮಯ ಹೂಗಳಿಂದ ಬಿಡಿಸಿದ ಭಾರತದ ಭೂಪಟ, ಟೊಮೆಟೊ, ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳಲ್ಲಿ ವಿಶೇಷ ಕೆತ್ತನೆ ನೋಡಗರನ್ನು ಸೆಳೆಯಿತು.
ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಜಾನೂರು ಕಲೆಯಲ್ಲಿ 26, ಹೂವಿನ ರಂಗೋಲಿ ಸ್ಪರ್ಧೆಯಲ್ಲಿ 15, ಇಕೆಬಾನದಲ್ಲಿ 12 ಥಾಯ್ ಆರ್ಟ್ನಲ್ಲಿ 16 ಮತ್ತು ತರಕಾರಿ ಕೆತ್ತನೆ ಸ್ಪರ್ಧೆಯಲ್ಲಿ 23 ಮಹಿಳೆಯರು ಭಾಗವಹಿಸಿದ್ದರು.
ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ನಟಿ ತಾರಾ ಅನುರಾಧಾ, ‘ತೆಂಗಿನ ಗರಿ, ತರಕಾರಿ ಹಾಗೂ ಪುಷ್ಪಗಳನ್ನು ಬಳಸಿಕೊಂಡು ಸುಂದರವಾದ ಕಲಾಕೃತಿಗಳನ್ನು ರಚಿಸಿರುವ ಎಲ್ಲರೂ ಅಭಿನಂದನಾರ್ಹರು. ಬಸವಣ್ಣ ಹಾಗೂ ವಚನ ಸಾಹಿತ್ಯ ಆಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗಿದೆ.
