ಉದಯವಾಹಿನಿ, ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಉದ್ಘಾಟನೆ ಮೂಲಕ ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ. ಅಸಂಖ್ಯಾತರ ಕರ ಸೇವಕರ ಹೋರಾಟ, ತ್ಯಾಗ, ಬಲಿದಾನದ ಫಲ ಸಾಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮರ ಪ್ರಾಣಪ್ರತಿಷ್ಠೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರಿದೆ. ಎಲ್ಲ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯ ಕ್ಷಣಕ್ಕೆ ಪ್ರತ್ಯೇಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ಧಕ್ಕಿದೆ. ಶ್ರೀರಾಮದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವು ನನ್ನದಾಗಿದೆ ಎಂದು ಅವರು ಹೇಳಿದ್ದಾರೆ.
ಎಲ್ಲ ಕರಸೇವಕರನ್ನು ಸ್ಮರಿಸುತ್ತಾ, ಈ ಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಷಯ ಕೋರುತ್ತಾ, ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ ಶಾಂತಿ, ನೆಮ್ಮದಿ ಸಮೃದ್ಧಿ ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೈ ಶ್ರೀರಾಮ್ ಎಂಬ ಹ್ಯಾಷ್ ಟ್ಯಾಗ್ನ್ನು ಬಳಸಿದ್ದಾರೆ.
