ಉದಯವಾಹಿನಿ, ಹೊಸಪೇಟೆ : ರಥಸಪ್ತಮಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಬೆಳಿಗ್ಗೆ 108 ಬಾರಿ ಸೂರ್ಯ ನಮಸ್ಕಾರ ಮಾಡಲಾಯಿತು.
ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್ ಮಾರ್ಗದರ್ಶನದಲ್ಲಿ 130ಕ್ಕೂ ಅಧಿಕ ಯೋಗಾಸಕ್ತರು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡರು. ಈ ಪೈಕಿ 36 ಮಂದಿ ಸಂಪೂರ್ಣ 108 ಬಾರಿ ಸೂರ್ಯ ನಮಸ್ಕಾರ ಮಾಡಿದರು. ಹಿರಿಯ ಯೋಗ ಸಾಧಕಿ ಪೂಜಾ ಐಲಿ ಸಹ ಮಾರ್ಗದರ್ಶನ ನೀಡಿದರು.
‘ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹ, ಮನಸ್ಸು ಉಲ್ಲಸಿತಗೊಳ್ಳುತ್ತದೆ. ಹಲವಾರು ಆಸನಗಳು ಈ ಒಂದು ಸೂರ್ಯನಮಸ್ಕಾರದಲ್ಲಿ ಅಡಕವಾಗಿರುವುದು ವಿಶೇಷ. ಇದನ್ನು ಮನೆಯಲ್ಲಿ ಕನಿಷ್ಠ 12 ಬಾರಿ ಮಾಡುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದು ಕಿರಣ್ ಕುಮಾರ್ ಸಲಹೆ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಹಿರಿಯ ಯೋಗ ಸಾಧಕ ಮತ್ತು ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಅವರು ಕೊನೆಯಲ್ಲಿ ಯೋಗ ಸಾಧಕರನ್ನು ಅಭಿನಂದಿಸಿ, ಸೂರ್ಯನಮಸ್ಕಾರದ ಮಹತ್ವವನ್ನು ತಿಳಿಸಿದರು. ಹಿರಿಯ ಯೋಗ ಗುರುಗಳಾದ ಅಶೋಕ್ ಚಿತ್ರಗಾರ್, ಶ್ರೀಧರ್, ಶಿವಮೂರ್ತಿ, ಮಲ್ಲಿಕಾರ್ಜುನ, ಶ್ರೀನಿವಾಸ ಮಂಚಿಕಟ್ಟಿ, ವಾಗೀಶ್, ಕಳಕಪ್ಪ, ಅನಂತ ಜೋಶಿ, ಬಾಲಕೃಷ್ಣ, ಚಂದ್ರಕಾ, ನೂರಜಾನ್ ರಾಜಾಭಕ್ಷಿ ಇತರರು ಪಾಲ್ಗೊಂಡಿದ್ದರು.
ಹೊಸಪೇಟೆ ನಗರದಲ್ಲಿ ಸುಮಾರು 28 ಸ್ಥಳಗಳಲ್ಲಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಉಚಿತ ಯೋಗ ಶಿಬಿರ ನಡೆಯುತ್ತಿದ್ದು, ಅಲ್ಲಿನ ಯೋಗ ಸಾಧಕರೂ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಸಸ್ಯ ವಿಜ್ಞಾನಿ ಮಾರುತಿ ಪೂಜಾರ್ ಅಗ್ನಿಹೋತ್ರ ನಡೆಸಿಕೊಟ್ಟರು.
ಯುವ ಸ್ಫೂರ್ತಿ: ಸಾಮೂಹಿಕ ಯೋಗ ಶಿಬಿರದಲ್ಲಿ ಮಕ್ಕಳು, ಯುವಕ, ಯುವತಿಯರೂ ಪಾಲ್ಗೊಂಡಿದ್ದರು. ಸತತ 108 ಸೂರ್ಯನಮಸ್ಕಾರಗಳನ್ನು ನಡೆಸಿ ಗಮನ ಸೆಳೆದ ಬಾಲಕ ಆರ್ಯ ಮತ್ತು ಕಾಲೇಜು ವಿದ್ಯಾರ್ಥಿ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು.
