ಉದಯವಾಹಿನಿ, ಬೆಂಗಳೂರು: ವಿಧಾನಸಭೆಯ ಸಭಾಂಗಣದ ಒಳಗೂ ಬಿಜೆಪಿ ಶಾಸಕರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಕೇಂದ್ರದ ಅನುದಾನದ ತಾರತಮ್ಯದ ವಿರುದ್ಧ ನಿರ್ಣಯ ಮಂಡಿಸಿದ್ದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯ ಒಳಗೆ ಧರಣಿ ನಡೆಸಿ ಕೋಲಾಹಲ ಸೃಷ್ಟಿಸಿದರು.
ಧರಣಿ ನಿರತ ಪ್ರತಿಪಕ್ಷಗಳ ಸದಸ್ಯರ ತರಹೇವಾರಿ ಘೋಷಣೆಗಳು, ಧಿಕ್ಕಾರಗಳನ್ನು ಕೂಗಿದರು. ಕಾಂಗ್ರೆಸ್‍ನ ಟೀಕೆಗಳು, ಬಳಸುವ ಭಾಷೆ, ಸಂಸ್ಕøತಿ ಇವುಗಳ ಬಗ್ಗೆ ಅನುಕಂಪ ಸೂಚಿಸುವಂತಹ ಛೇ.. ಛೇ.. ಎಂದು ಹೇಳುವ ಮೂಲಕ ಮೂದಲಿಸಿದರು.ಏನಿಲ್ಲ ಏನಿಲ್ಲ ಎಂಬ ಟ್ರೋಲ್ ಹಾಡನ್ನು ಶಾಸಕರು ಧರಣಿ ನಡೆಸುವ ವೇಳೆ ಹಾಡಿದ್ದು ಗಮನಸೆಳೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕರು ಹಾಡುಗಾರಿಕೆ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಅವರಿಗಾಗಿ ಒಂದು ದಿನ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿಧಾನಸಭೆ ಸಚಿವಾಲಯದ ವತಿಯಿಂದ ಆಯೋಜಿಸಲಾಗುವುದು ಎಂದು ಹೇಳಿದರು.

ಸರ್ಕಾರದ ವಿಧೇಯಕಗಳ ಮಂಡನೆ, ಪರ್ಯಾಲೋಚನೆ, ಚರ್ಚೆಗಳಿಗೆ ಅಡ್ಡಿಪಡಿಸುವಂತೆ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಗದ್ದಲದ ನಡುವೆಯೇ ಎರಡು ವಿಧೇಯಕಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರಗೊಂಡವು. ಸಭಾಧ್ಯಕ್ಷರು ವಿಧೇಯಕಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ದನಿ ಮತದ ಮೂಲಕವೇ ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ ಎಂದು ಘೋಷಿಸಲಾಯಿತು. ಗದ್ದಲ ನಡುವೆಯೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ನಿರ್ಣಯಕ್ಕೆ ಪ್ರತಿಯಾಗಿ ಖಂಡನಾ ನಿರ್ಣಯವನ್ನು ಮಂಡಿಸಿ ಸೇಡು ತೀರಿಸಿಕೊಂಡರು. ಎಷ್ಟೇ ಪ್ರಯತ್ನಪಟ್ಟರೂ ಗದ್ದಲ, ಧರಣಿ ತಹಬದಿಗೆ ಬರದೇ ಇದ್ದುದರಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪದಲ್ಲಿ ಇಂದಿನ ಪ್ರಶ್ನೋತ್ತರ ಸೂಚನೆ, ಗಮನಸೆಳೆಯುವ ಸೂಚನೆ ಹಾಗೂ ಶೂನ್ಯವೇಳೆ ಕಲಾಪಗಳನ್ನು ಸೋಮವಾರ ಬೆಳಗ್ಗೆ 9.30ಕ್ಕೆ ಮುಂದೂಡಿದರು.

Leave a Reply

Your email address will not be published. Required fields are marked *

error: Content is protected !!