ಉದಯವಾಹಿನಿ, ಬೆಂಗಳೂರು : ಕಾರ್ಮಿಕ ಇಲಾಖೆಯ ಸೆಸ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸದಸ್ಯ ಪ್ರಕಾಶ್ ಸಿಂಗ್ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸೆಸ್ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂಬ ಆಧಾರ ರಹಿತ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಮ್ಮ ಇಲಾಖೆಯಲ್ಲೇ 10 ಸಾವಿರ ಕೋಟಿ ಅನುದಾನವಿದೆ. ಹೀಗಾಗಿ ಸೆಸ್ ಹಣವನ್ನು ಬಳಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಕಾರ್ಮಿಕ ಇಲಾಖೆಯ ಸೆಸ್ ಹಣವನ್ನು ಗ್ಯಾರಂಟಿ ಯೋಜನೆಗೆ ಕೊಡುತ್ತಿಲ್ಲ. ಕಾರ್ಮಿಕ ಇಲಾಖೆಯಲ್ಲಿ 10 ಸಾವಿರ ಕೋಟಿ ಅನುದಾನ ಇದೆ. ಸದ್ಯ ಇಲಾಖೆಯಲ್ಲಿ ಇರುವುದು 6500 ಕೋಟಿ ಮಾತ್ರ.
2500 ಕೋಟಿ ವಿದ್ಯಾರ್ಥಿ ವೇತನಕ್ಕೆ ಕೊಡಬೇಕಾಗುತ್ತದೆ. ಮೊದಲು 2 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಹೀಗಾಗಿ ಹೆಚ್ಚು ವಿದ್ಯಾರ್ಥಿ ವೇತನ ಕೊಡಲಾಗುತ್ತಿತ್ತು. ಈಗ 12 ಲಕ್ಷ ಕಾರ್ಮಿಕ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ್ದಾರೆ. ಹೀಗಾಗಿ ಹಿಂದೆ ಇದ್ದಷ್ಟು ವಿದ್ಯಾರ್ಥಿ ವೇತನ ಕೊಡಲು ಸಾಧ್ಯವಿಲ್ಲ. ಹೀಗಾಗಿ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಕಡಿಮೆ ಮಾಡಲಾಗಿದೆ. ಇದನ್ನ ಸದ್ಯ ಜಾಸ್ತಿ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸಂತೋಷ ಲಾಡ್ ಸ್ಪಷ್ಟನೆ ನೀಡಿದರು.

ಇದಕ್ಕೂ ಮುನ್ನ ಬಿಜೆಪಿ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಈ ಸರ್ಕಾರ ಕಡಿಮೆ ಮಾಡಿದೆ. 25 ಸಾವಿರ ಇದ್ದ ವಿದ್ಯಾರ್ಥಿ ವೇತನಕ್ಕೆ 4600 ರೂ ಕೊಡಲಾಗುತ್ತಿದೆ. 8 ಸಾವಿರ ಇರುವ ವಿದ್ಯಾರ್ಥಿ ವೇತನ 1 ಸಾವಿರಕ್ಕೆ ಇಳಿದಿದೆ. ವಿದ್ಯಾರ್ಥಿ ವೇತನ ಜೊತೆಗೆ ವೈದ್ಯಕೀಯ ವೆಚ್ಚವನ್ನು ಕಡಿತ ಮಾಡಲಾಗಿದೆ. ಕಾರ್ಮಿಕ ಮಕ್ಕಳಿಗೆ ಮಾಡುವುದು ಸರಿಯಲ್ಲ. ಈ ಸಮಸ್ಯೆ ಪರಿಹಾರ ಮಾಡಿ ಎಂದು ಕೋರಿಕೊಂಡರು.

Leave a Reply

Your email address will not be published. Required fields are marked *

error: Content is protected !!