ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರವನ್ನು ವಜಾ ಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂದು ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಅವರು ಪ್ರವಾಸದಲ್ಲಿದ್ದ ಕಾರಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಉಪನಾಯಕರಾದ ಅರವಿಂದ್ ಬೆಲ್ಲದ್, ಸುನೀಲ್ ವಲ್ಯಾಪುರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎರಡೂ ಸದನಗಳ ಶಾಸಕರು ರಾಜ್ಯಪಾಲರ ಕಾರ್ಯದರ್ಶಿಗೆ ದೂರು ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸರ್ಕಾರವನ್ನು ವಜಾ ಮಾಡಿ ಎಂದು ಮನವಿ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಗಿದೆ. ಗಲಾಟೆ, ಗಲಭೆ ಶುರುವಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳೇ ಅವರನ್ನು ಬಿಡಿ ಎಂದಿದ್ದಾರೆ. ಗೃಹಸಚಿವರು ಕೂಡ ವಿಚಾರಣೆ ಮಾಡಿ ಬಿಟ್ಟಿದ್ದೇವೆ ಎಂದಿದ್ದಾರೆ. ಪ್ರಕರಣ ಮುಚ್ಚಿ ಹಾಕಿದ್ದಾರೆ. ಇಂದು ವರದಿ ಕೊಡಬಹುದಿತ್ತು. ಆದರೆ ಅವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಸರ್ಕಾರ ಎಫ್‍ಎಸ್‍ಎಲ್ ವರದಿಯನ್ನೂ ತಿರುಚುವ ಪ್ರಯತ್ನವನ್ನು ಮಾಡಲಿದೆ. ಪಾಪಿ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬೇರೆ ಯಾವುದೇ ಸರ್ಕಾರ ಇದಿದ್ದರೆ ಸಿಎಂ ರಾಜೀನಾಮೆ ಕೊಡುತ್ತಿದ್ದರು. ವಿಧಾನಸೌಧವನ್ನು ಸ್ಲೀಪರ್ ಸೆಲ್ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಂಗಲ್ ಹನುಮಂತಯ್ಯ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹಾಕಿಸಿದ್ದಾರೆ. ಅವರ ಹೇಳಿಕೆಗೆ ವಿರೋಧಿ ನೀತಿ ತಾಳುತ್ತಿದೆ ಈ ಸರ್ಕಾರ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!