ಉದಯವಾಹಿನಿ, ಬೆಂಗಳೂರು: ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದ ಕನಿಷ್ಠ 3 ಲಕ್ಷ ಜನರ ಅಭಿಪ್ರಾಯ ಸಂಗ್ರಹದ ಗುರಿ ಇದೆ. ದೇಶದಲ್ಲಿ 1 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಂಕಲ್ಪ ಪತ್ರ ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಮಿಸ್ಡ್ ಕಾಲ್ ನೀಡುವುದರ ಮೂಲಕ ಪಾಲ್ಗೊಳ್ಳಬಹುದು. ಕರೆ ಮಾಡಲು ಸಂಖ್ಯೆ : 909090-2124 ನೀಡಲಾಗಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ನರೇಂದ್ರ ಮೋದಿಜೀ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಚಿಂತನೆಯಂತೆ ಪ್ರಣಾಳಿಕೆ ಬದಲು ಜನಾಭಿಪ್ರಾಯ ಪಡೆದು ಸಂಕಲ್ಪ ಪತ್ರದ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಬಿಜೆಪಿ ಕೇಂದ್ರ ಸರಕಾರವು 2014ರ, 2019ರ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. 10 ವರ್ಷದ ಮೋದಿಜೀ ಅವರ ಆಡಳಿತಾವಧಿಯಲ್ಲಿ ಭರವಸೆ ಈಡೇರಿಸಿದ್ದಲ್ಲದೆ, ಯೋಜನೆ ಶಂಕುಸ್ಥಾಪನೆ ಜೊತೆಗೆ ಉದ್ಘಾಟನಾ ದಿನಾಂಕ ನಿಗದಿಪಡಿಸಿ ಸಕಾಲದಲ್ಲಿ ಪೂರ್ಣಗೊಳಿಸಿದ್ದನ್ನು ನೋಡಿದ್ದೇವೆ ಎಂದು ವಿವರಿಸಿದರು. ಜನಸಂಘ ಕಾಲದಿಂದ ಪ್ರಣಾಳಿಕೆಯಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನಕ್ಕೆ ಕಾರಣವಾದ ಜಮ್ಮು- ಕಾಶ್ಮೀರದ 370ನೇ ವಿಧಿ ರದ್ದು ಮಾಡುವ ಮೂಲಕ ಮೋದಿಯವರು ನುಡಿದಂತೆ ನಡೆದಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಈ ಬಾರಿ ಘೋಷಣಾ ಪತ್ರ ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಮುಂದಿಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!