ಉದಯವಾಹಿನಿ, ಶಿಗ್ಗಾವಿ: ತಾಲ್ಲೂಕಿನ ಗುಡ್ಡದಚನ್ನಾಪುರ ಗ್ರಾಮದಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಮಹಾ ರಥೋತ್ಸವ ಸುತ್ತಲಿನ ಗ್ರಾಮಗಳ ಭಕ್ತ ಸಮೂಹದ ನಡುವೆ ಸಡಗರ, ಸಂಭ್ರಮದಿಂದ ಜರುಗಿತು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯು ವಿವಿಧ ರಸ್ತೆಗಳ ಮೂಲಕ ಸಾಗಿತು. ಜಾಂಜ್‌ ಮೇಳ, ಡೊಳ್ಳು ಮೇಳ, ಪುರವಂತರಿಂದ ವೀರಭದ್ರ ದೇವರ ಪೌರಾಣಿಕ ಹಿನ್ನೆಲೆಯ ರೂಪದರ್ಶಿಕೆಯೊಂದಿಗೆ ಸಂಚರಿಸಿತು. ರಥೋತ್ಸವಕ್ಕೆ ಮಹಿಳೆಯರು, ಮಕ್ಕಳು ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ಕಳಸಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯ ಹರಕೆ ತೀರಿಸಿದರು. ನೂತನವಾಗಿ ವಿವಾಹವಾದ ಜೋಡಿಗಳು ವಿಶೇಷವಾಗಿ ಜಾತ್ರಾ ಮಹೋತ್ಸವದಲ್ಲಿ ಗಮನ ಸೆಳೆದರು.
ರಥೋತ್ಸವದ ಸ್ವಾಗತಕ್ಕಾಗಿ ಗ್ರಾಮದ ಎಲ್ಲ ಬೀದಿಗಳನ್ನು ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಕೊಟ್ಟೂರು ಗುರು ಬಸವೇಶ್ವರ ದೇವಸ್ಥಾನದ ಸೇವಾ ಸಮಿತಿ ಸದಸ್ಯರಿಂದ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಅನ್ನಪ್ರಸಾದದ ಸೇವೆ ನಡೆಯಿತು.
ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್.ಮರಿಗೌಡ್ರ, ಉಪಾಧ್ಯಕ್ಷ ಶಿವನಗೌಡ ಮರಿಗೌಡ್ರ, ಈರಯ್ಯ ಗುಡ್ಡದಮಠ, ಬಸವನಗೌಡ ಮಾಜಿಗೌಡ್ರ, ವಿರೂಪಾಕ್ಷಗೌಡ ಮಾಜಿಗೌಡ್ರ, ರುದ್ರಗೌಡ ಮರಿಗೌಡ್ರ, ಶಂಭು ಮೇಲಿನಮಠ, ಷಣ್ಮುಖ ಕಾಳಣ್ಣವರ, ಶಂಭಣ್ಣ ಕಡಕೋಳ, ಫಕ್ಕೀರೇಶ ಹಳ್ಳಪ್ಪನವರ, ವೀರೇಶ ಬಡಿಗೇರ ಇದ್ದರು.

Leave a Reply

Your email address will not be published. Required fields are marked *

error: Content is protected !!