ಉದಯವಾಹಿನಿ , ಸಿರುಗುಪ್ಪ: ಲೋಕಸಭಾ ಚುನಾವಣೆ ಅಂಗವಾಗಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಅಂತರ್ಜಿಲ್ಲಾ ಮಾರ್ಗದಲ್ಲಿ ಒಂದು, ಸೀಮಾಂಧ್ರ ಪ್ರದೇಶದ ಗಡಿ ಬಾಗದಲ್ಲಿ 4 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ಶಂಶಾಲಂ ತಿಳಿಸಿದರು.
ನಗರದ ತಹಶೀಲ್ದಾರ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೀಮಾಂದ್ರ ಪ್ರದೇಶಧ ಗಡಿಭಾಗದಲ್ಲಿ ಬರುವ ಇಟಿಗಿಹಾಳು, ವತ್ತುಮುರುವಣಿ, ಮಾಟಸೂಗೂರು, ಕೆ.ಬೆಳಗಲ್ಲು ಗ್ರಾಮಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪೊಲೀಸರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ. ಮತ್ತೊಂದು ಅಂತರ್ಜಿಲ್ಲಾ ಮಾರ್ಗವಾಗಿರುವ ಇಬ್ರಾಹಿಂಪುರ ಗ್ರಾಮದ ಹತ್ತಿರ ತುಂಗಭದ್ರ ನದಿಯ ಸೇತುವೆ ಸಮೀಪ ಅಂತರ್ಜಿಲ್ಲಾ ಚೆಕ್ಪೋಸ್ಟನ್ನು ತೆರೆಯಲಾಗಿದ್ದು, ವಿವಿದ ಜಿಲ್ಲೆಗಳಿಂದ ಆಗಮಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
