ಉದಯವಾಹಿನಿ, ಅರಸೀಕೆರೆ: ಕೆಲವರು ನಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ತಾರೆ, ಆದರೆ ರೈತರ ಪರ ಯಾವುದೇ ಕೆಲಸ ಮಾಡಿಲ್ಲ ಎಂದು ಗೌಡರ ಕುಟುಂಬದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಕಿಡಿ ಕಾರಿದರು.
ಮೈಸೂರು ರಸ್ತೆಯಲ್ಲಿ ಇರುವ ಕಸ್ತೂರಿಬಾ ಶಿಬಿರದ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ಹಾಸನದಲ್ಲಿ ಕುಮಾರಸ್ವಾಮಿ, ಪ್ರಜ್ವಲ್ ತಪ್ಪು ಮಾಡಿದ್ದಾರೆ ಕ್ಷಮಿಸಿ ಎಂದು ಪದೇ ಪದೆ ಹೇಳಿದ್ದಾರೆ. ತಪ್ಪು ಮಾಡಿದ ವ್ಯಕ್ತಿಗೆ ಏಕೆ ಮತ ಹಾಕಬೇಕು ಎಂಬುದನ್ನು ಮತದಾರರು ಯೋಚಿಸಿ ಎಂದರು.
ಲೋಕಸಭೆಯಲ್ಲಿ ನಿಮ್ಮ ಪರ ದನಿ ಎತ್ತದವರನ್ನು, ಜನಸಾಮಾನ್ಯರಿಗೆ, ಅಭಿವೃದ್ಧಿಗೆ ತೊಂದರೆ ಕೊಡುವವರನ್ನು ರಾಜಕೀಯದಿಂದ ದೂರ ಇಡಬೇಕು. ಮತದ ಮೂಲಕ ತಕ್ಕ ಪಾಠ ಕಲಿಸಿ, ಶ್ರೇಯಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರ್ಕಾರ ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಗೌರವ ತಂದುಕೊಡಬೇಕು ಗ್ರಾಮೀಣ ಜನರನ್ನು ಆರ್ಥಿಕವಾಗಿ ಮೇಲೆತ್ತಲೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ಈ ಬರಗಾಲದಲ್ಲಿಯೂ ಕೂಡ ಕುಡಿಯುವ ನೀರು, ಉದ್ಯೋಗ ದನಕರಿಗೆ ಮೇವಿಗೆ ತೊಂದರೆ ಆಗದಂತೆ ಜನರ ಕಷ್ಟಗಳನ್ನು ದೂರ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಪಕ್ಷ ಬಲಿಷ್ಠವಾಗಲು ತಮ್ಮ ಸಂಪೂರ್ಣ ಬೆಂಬಲ ಬೇಕೆಂದು ಅವರು ವಿನಂತಿಸಿದರು.
ಜಿಲ್ಲೆಯ ರಾಜಕಾರಣದಲ್ಲಿ ಪುಟ್ಟಸ್ವಾಮಿಗೌಡ, ಶ್ರೀಕಂಠೇಗೌಡರು ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಅವರ ಗೆಲುವಿಗೆ ಕಾರ್ಯಕರ್ತರು ಹೋರಾಟ ಮಾಡಬೇಕು. ರಾಜ್ಯದ ಕಾಂಗ್ರೆಸ್ ಸರಕಾರದ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಹಳ್ಳಿಗಾಡಿನ ಜನರ ಜೀವನ ನಡೆಸಲು ಅನುಕೂಲವಾಗಲು ಅಕ್ಕಿ, ಉಚಿತ ಬಸ್, ವಿದ್ಯಾನಿಧಿ, ವಿದ್ಯುತ್, ಮಹಿಳೆಯರಿಗೆ 2 ಸಾವಿರ ಹಣ ನೀಡಿದ್ದಾರೆ. ಅಲ್ಲದೇ ಈ ಬಾರಿಯಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾವಾಗಲಿದೆ. ರೈತರ, ಜನರ ಬಗ್ಗೆ ಕಳಕಳಿ ಇರುವ ಪಕ್ಷ ಕಾಂಗ್ರೆಸ್ ಪಕ್ಷ ಎಂದರು.
