ಉದಯವಾಹಿನಿ, ಬೆಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಿದ ಬಾಂಬ್ ತಯಾರಿಸಲು ದುಷ್ಕರ್ಮಿಗಳು ಸುಮಾರು 2 ತಿಂಗಳು ಸಮಯ ತೆಗೆದುಕೊಂಡಿದ್ದರು ಎಂಬುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.ಈ ಶಂಕಿತ ಉಗ್ರರು ಬಾಂಬ್ ತಯಾರಿಸಲು ಬೇಕಾದ ಕೆಲವು ಕಚ್ಚಾವಸ್ತುಗಳನ್ನು ಆನ್ಲೈನ್ ಮೂಲಕ ಹಾಗೂ ಮತ್ತೆ ಕೆಲವು ಸಾಮಗ್ರಿಗಳನ್ನು ವಿವಿಧ ಅಂಗಡಿಗಳಲ್ಲಿ ಖರೀದಿಸಿರುವುದು ಗೊತ್ತಾಗಿದೆ.
ಶಂಕಿತ ಉಗ್ರರು ಆನ್ಲೈನ್ನಲ್ಲಿ ಡೆಟೋನೇಟರ್, ಬ್ಯಾಟರಿ, ಟೈಮರ್, ರಂಜಕ ಹಾಗೂ ಅಂಗಡಿಗಳಲ್ಲಿ ನಟ್, ಬೋಲ್ಟ್, ಕೆಲವು ವೈರುಗಳನ್ನು ಖರೀದಿಸಿರುವುದನ್ನು ಎನ್ಐಎ ಪತ್ತೆಹಚ್ಚಿದೆ.ಕೆಫೆ ಸ್ಫೋಟದ ಬಗ್ಗೆ ಎನ್ಐಎ ಈಗಾಗಲೇ ಬಂಧಿಸಿರುವ ಮುಜಾಮಿಲ್ ಶರೀಫ್ ಈ ಎಲ್ಲಾ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿ ಬಾಂಬ್ ತಯಾರಿಸುತ್ತಿದ್ದ ಅಬ್ದುಲ್ ಮತಿನ್ ತಾಹ ಹಾಗೂ ಪ್ರಮುಖ ಆರೋಪಿ ಮುಸಾವೀರ್ಗೆ ನೀಡುತ್ತಿದ್ದನು ಎಂಬುದು ಎನ್ಐಎ ತನಿಖೆಯಿಂದ ಗೊತ್ತಾಗಿದೆ.
ಆನ್ಲೈನ್ ಹಾಗೂ ಅಂಗಡಿಗಳಲ್ಲಿ ಖರೀದಿಸಿದ ಈ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ, ಶಂಕಿತ ಉಗ್ರರು ನಗರ ಹೊರವಲಯದಲ್ಲಿ ಬಾಂಬ್ ಸಿದ್ಧ ಪಡಿಸಿದ್ದರು ಎಂಬುದನ್ನು ಎನ್ಐಎ ಪತ್ತೆ ಹಚ್ಚಿದೆ.ಈ ಬಾಂಬ್ ತಯಾರಿಸಲು ಶಂಕಿತ ಉಗ್ರರು ಕೇವಲ ಐದರಿಂದ ಆರು ಸಾವಿರ ರೂ. ವೆಚ್ಚ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಕೆಫೆಯಲ್ಲಿ ಮಾ.1ರಂದು ಬಾಂಬ್ ಸ್ಫೋಟದ ನಂತರ ತನಿಖೆ ಕೈಗೊಂಡ ಎನ್ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೊರೆತ ಮಾಹಿತಿಯಿಂದ ಈ ಸ್ಫೋಟದ ಹಿಂದೆ ಶಂಕಿತ ಉಗ್ರರಾದ ಅಬ್ದುಲ್ ಮತಿನ್ ತಾಹ ಮತ್ತು ಮುಸಾವೀರ್ ಇರುವುದು ಗೊತ್ತಾಗಿತ್ತು.
