ಉದಯವಾಹಿನಿ, ಬೆಂಗಳೂರು: ಸಂವಿಧಾನ ಬದಲಾವಣೆ ಮಾಡುವಂಥ ದುಸ್ಸಾಹಕ್ಕೆ ಬಿಜೆಪಿ ಎಂದಿಗೂ ಕೈ ಹಾಕುವುದಿಲ್ಲ. ದಿ.ಇಂದಿರಾಗಾಂಧಿಯವರು ಸಂವಿಧಾನವನ್ನೇ ಬುಡುಮೇಲು ಮಾಡಿದಾಗ ಕಾಂಗ್ರೆಸ್ನವರು ಏಕೆ ಸುಮ್ಮನಿದ್ದರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರಮೋದಿಯವರೇ ಹೇಳಿರುವಾಗ ಪದೇ ಪದೇ ಇದೇ ಮಾತು ಪ್ರಸ್ತಾಪಿಸುತ್ತಿರುವ ಉದ್ದೇಶವಾದರೂ ಏನು ಎಂದು ತರಾಟೆಗೆ ತೆಗೆದುಕೊಂಡರು.
ನರೇಂದ್ರಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದಕ ಕೃತ್ಯಗಳು ಶೇ.90 ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ದಿನ ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ದೇಶದಲ್ಲಿ ನರೇಂದ್ರಮೋದಿ ದೇಶ ಕಾಯುತ್ತಿದ್ದಾರೆ. ದೇಶದ ರಕ್ಷಣೆ ಮಾಡುತ್ತಿದ್ದಾರೆ.ರಾಷ್ಟ್ರದ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಚುನಾವಣಾ ಸಂದರ್ಭದಲ್ಲಿ ವೈಯಕ್ತಿಕ ಆರೋಪ ಸರಿಯಲ್ಲ. ಆದರೆ ಪ್ರಧಾನಿ ಮೋದಿಯವರನ್ನು ಹಿಟ್ಲರ್ ಹಾಗೂ ಮುಸೊಲೊನಿ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನೈಜ ಹಿಟ್ಲರ್ ಮನಸ್ಥಿತಿ ಕಾಂಗ್ರೆಸ್ ನಾಯಕರದ್ದು ಎಂದು ತಿರುಗೇಟು ನೀಡಿದರು. ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಉಗ್ರರು ಕಾಂಗ್ರೆಸ್ ಪಕ್ಷದ ಸಹೋದರಿಯಂತಿರುವ ಮಮತಾ ಬ್ಯಾನರ್ಜಿ ಅವರ ತವರಿನಲ್ಲೇ ಸಿಕ್ಕಿಬಿದ್ದಿದ್ದು, ಕರ್ನಾಟಕದ ಪರವಾಗಿ ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಆರೋಪಿಗಳ ಬಂಧನದಿಂದ ನಾಡಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಘಟನೆಯ ಸ್ಥಳಕ್ಕೆ ಹೋಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿದ್ದರು. ಅಲ್ಪಸಂಖ್ಯಾತರ ವಿರುದ್ಧ ಆರೋಪ ಬಂದರೆ ವೋಟ್ ಬ್ಯಾಂಕ್ ಖಾಲಿ ಆಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದು ಎಂದು ಟೀಕಿಸಿದರು.
