ಉದಯವಾಹಿನಿ,ಬೆಂಗಳೂರು: ವಿಧಾನಪರಿಷತ್‌ನ ಸದಸ್ಯ ಸ್ಥಾನಕ್ಕಾಗಿ ಮಾಜಿ ಸಚಿವ ರಮೇಶ್‌ಕುಮಾರ್‌ ಲಾಬಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕೋಲಾರ ಜಿಲ್ಲೆಯ ಶಾಸಕರಾದ ಪ್ರದೀಪ್‌ ಈಶ್ವರ್‌, ಕೊತ್ತನೂರು ಮಂಜುನಾಥ್‌, ವಿಧಾನಪರಿಷತ್‌ ಸದಸ್ಯರಾದ ನಜೀರ್‌ ಅಹಮದ್‌, ಅನಿಲ್‌ಕುಮಾರ್‌ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಭೇಟಿ ನೀಡಿದ ನಿಯೋಗ ರಮೇಶ್‌ಕುಮಾರ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ನೇಮಿಸಬೇಕು ಎಂದು ಒತ್ತಡ ಹೇರಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ರಮೇಶ್‌ಕುಮಾರ್‌ ಜಿಲ್ಲಾ ರಾಜಕಾರಣದಲ್ಲಿ ಪ್ರಬಲ ಹಿಡಿತ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಗಂಭೀರ ಚರ್ಚೆಗಳು ನಡೆಯುವ ವೇಳೆಯಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಪ್ರತಿತಂತ್ರ ರೂಪಿಸಿ ರಮೇಶ್‌ಕುಮಾರ್‌ ಯಶಸ್ವಿಯಾಗಿದ್ದರು.
ಮುನಿಯಪ್ಪ ತಮ್ಮ ಅಳಿಯ ದೊಡ್ಡಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಿಸಲು ನಡೆಸುತ್ತಿದ್ದ ಲಾಬಿಗೆ ಎದುರೇಟು ನೀಡಿದ್ದ ರಮೇಶ್‌ಕುಮಾರ್‌, ಶಾಸಕರು ಹಾಗೂ ಸಚಿವರಿಂದ ರಾಜೀನಾಮೆ ಕೊಡಿಸಲು ಮುಂದಾಗಿದ್ದರು.
ಕೊನೆಗೆ ಎರಡೂ ಬಣವನ್ನು ಸರಿದೂಗಿಸುವ ಸಲುವಾಗಿ ಹೈಕಮಾಂಡ್‌ ಬೇರೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೈ ತೊಳೆದುಕೊಂಡಿದ್ದರು. ಈಗ ರಮೇಶ್‌ಕುಮಾರ್‌ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ತೀವ್ರ ಲಾಬಿ ನಡೆಸಲಾರಂಭಿಸಿದ್ದಾರೆ. ಮುನಿಯಪ್ಪ ಅವರ ಬಣ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *

error: Content is protected !!