ಉದಯವಾಹಿನಿ, ಮಂಗಳೂರು: ಮಳೆ ಶುರುವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಸೊಪ್ಪು-ತರಕಾರಿಗಳ ದರ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು, ಪಾಲಕ್‌ ಸೊಪ್ಪಿನ ದರ ಮೂರು ಪಟ್ಟು ಹೆಚ್ಚಳವಾಗಿದೆ. ತುಸು ಅಗ್ಗದ ದರದಲ್ಲಿ ಸಿಗುತ್ತಿದ್ದ ಟೊಮೆಟೊ, ಆಲೂಗಡ್ಡೆ, ಮೂಲಂಗಿಯಂತಹ ತರಕಾರಿಗಳ ದರವೂ ಹೆಚ್ಚಾಗಿದೆ.ಕೊತ್ತಂಬರಿ ಸೊಪ್ಪು ಸಗಟುದರ ಕೆ.ಜಿ.ಗೆ 50ರ ಆಸುಪಾಸಿನಲ್ಲಿತ್ತು. ಈಗ ₹ 200ರವರೆಗೆ ತಲುಪಿದೆ. ಚಿಲ್ಲರೆ ಮಾರಾಟಗಾರರು ಒಂದು ಕಟ್ಟಿಗೆ ₹ 5 ರಿಂದ ₹ 10ಕ್ಕೆ ರೂಪಾಯಿಗೆ ಮಾರುತ್ತಿದ್ದರು. ಈಗ ಮೂರರಿಂದ ನಾಲ್ಕು ಪಟ್ಟು ಹೆಚ್ಚು ದರಕ್ಕೆ ಮಾರುತ್ತಿದ್ದಾರೆ. ಪಾಲಕ್‌ ಸೊಪ್ಪು ಕಟ್ಟಿಗೆ ₹ 8ರಿಂದ ₹ 10ಕ್ಕೆ ಸಿಗುತ್ತಿತ್ತು. ಅದರ ದರ ಈಗ ₹ 15ರಿಂದ ₹ 20ಕ್ಕೆ ಏರಿಕೆಯಾಗಿದೆ. ಹಸಿ ಮೆಣಸಿನ ಕಾಯಿ ದರವು ಕೆ.ಜಿ.ಗೆ ₹ 120ಕ್ಕೆ ಹೆಚ್ಚಳವಾಗಿದೆ ಎಂದು ತರಕಾರಿ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.

ಕೆ.ಜಿ.ಗೆ ₹ 20ರಲ್ಲಿ ಸಿಗುತ್ತಿದ್ದ ಟೊಮೆಟೊ ದರವೂ ₹ 50ರಿಂದ ₹ 55ಕ್ಕೆ ಏರಿಕೆಯಾಗಿದೆ. ಮಂಗಳೂರು ಸೌತೆಕಾಯಿ ಕೆ.ಜಿ.ಗೆ 25ರಂತೆ ಮಾರಾಟವಾಗುತ್ತಿತ್ತು. ಅದರ ದರ ₹ 50ಕ್ಕೆ ಹೆಚ್ಚಳವಾಗಿದೆ. ₹ 25ರ ಆಸುಪಾಸಿನಲ್ಲಿದ್ದ ಆಲೂಗಡ್ಡೆ ಹಾಗೂ ಬೀಟ್‌ರೂಟ್‌ ದರ ₹ 40ಕ್ಕೆ ಏರಿಕೆಯಾಗಿದೆ ಎಂದರು. ಬೂದು ಕುಂಬಳಕಾಯಿ ದರ ₹ 30ಕ್ಕೆ, ಮೂಲಂಗಿ ದರ ₹70ಕ್ಕೆ ಏರಿಕೆಯಾಗಿದೆ ಎಂದರು.
₹ 200ರ ಗಡಿ ದಾಟಿದ್ದ ಬಿನ್ಸ್‌ ದರ ತುಸು ಇಳಿಕೆಯಾಗಿದ್ದು ಕೆ.ಜಿ.ಗೆ ₹ 180ರಲ್ಲಿ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿ. ಹಾಗಲಕಾಯಿ ₹ 70, ಬದನೆಕಾಯಿ, ನುಗ್ಗೆಕಾಯಿ ₹ 100ಕ್ಕೆ ಮಾರಾಟವಾಗುತ್ತಿದೆ. ತರಕಾರಿ ಬೆಳೆಯುವ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ವ್ಯಾಪಕವಾಗಿ ಮಳೆಯಾಗಿದ್ದು, ತರಕಾರಿಗಳು ಕೊಳೆತುಹೋಗಿವೆ. ಹಾಗಾಗಿ ದರ ಹೆಚ್ಚಳವಾಗಿದೆ. ಸೊಪ್ಪುಗಳು ಮಳೆಗಾಲದಲ್ಲಿ ಕೊಳೆಯುತ್ತವೆ. ಹಾಗಾಗಿ ಪ್ರತಿ ಮಳೆಗಾಲದಲ್ಲೂ ‘ಕರಾವಳಿಯಲ್ಲಿ ಜೂನ್‌ 1ರಿಂದ ಮೀನುಗಾರಿಕೆಗೆ ರಜೆ ಆರಂಭವಾಗಲಿದೆ. ಆಗ ತರಕಾರಿಗೆ ಬೇಡಿಕೆ ಹೆಚ್ಚಲಿದ್ದು, ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಜಿಲ್ಲೆಯ ಕೆಲವು ಕಡೆ ಸ್ಥಳೀಯರು ತರಕಾರಿ ಬೆಳೆಯುತ್ತರೆ. ಸ್ಥಳೀಯವಾಗಿ ಬೆಳೆಯುವ ತರಕಾರಿ ಮಾರುಕಟ್ಟೆಗೆ ಬರುವವರೆಗೂ ದರ ಕಡಿಮೆಯಾಗುವ ಲಕ್ಷಣವಿಲ್ಲ’ ಎಂದು ತರಕಾರಿ ವ್ಯಾಪಾರಿಯೊಬ್ಬರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!