ಉದಯವಾಹಿನಿ, ಕೋಲಾರ: ರಾಷ್ಟ್ರೀಯ ಡೆಂಗ್ಯೂ ದಿನ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ನಗರದಲ್ಲಿ ಮಾನವ ಸರಪಳಿ ಪ್ರದರ್ಶಿಸಿ ಜನ ಜಾಗೃತಿ ಮೂಡಿಲಾಯಿತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಚಾಲನೆ ನೀಡಿದರು.
ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಕೋಲಾರ ಜಿಲ್ಲೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಿಗ್ನಲ್ ಸರ್ಕನಲ್ಲಿ ಮಾನವ ಸರಪಳಿಯ ಮೂಲಕ ಸಮುದಾಯದೊಂದಿಗೆ ಸೇರಿ, ಡೆಂಗ್ಯೂ ಜ್ವರ ನಿಯಂತ್ರಿಸೋಣ ಎಂಬ ಷೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜೂನ್ ತಿಂಗಳಿಂದ ಮುಂಗಾರು ಮಳೆ ಪ್ರಾರಂಭವಾಗುತ್ತದೆ ಆದ್ದರಿಂದ ಸ್ವಚ್ಛ ಮಳೆ ನೀರು, ತೆಂಗಿನ ಕಾಯಿ ಚಿಪ್ಪುಗಳಲ್ಲಿ ಶೇಖರವಾಗುವ ನೀರು ಮತ್ತು ಟೈಯರ್‍ಗಳಲ್ಲಿನ ನಿಂತ ನೀರಲ್ಲಿ ಈಡೀಸ್ ಈಜಿಪ್ಟ್ ಸೊಳ್ಳೆಯ ಸಂತಾನೋತ್ಪತ್ತಿ ಹೆಚ್ಚಾಗದಂತೆ ತಡೆಯಬೇಕು ಎಂದು ತಿಳಿಸಿದರು.
ಈ ಸೊಳ್ಳೆಯನ್ನು ಟೈಗರ್ ಸೊಳ್ಳೆ ಎಂದು ಕರೆಯುತ್ತಾರೆ. ಇದು ಹಗಲಿನ ಸಮಯದಲ್ಲಿ ಮನುಷ್ಯರನ್ನು ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ. ಇದ್ದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಮುಖ್ಯವಾಗಿ ಬಿಳಿ ರಕ್ತಕಣಗಳು ಕಮ್ಮಿಯಾಗುವುದು. ಈ ರೋಗದ ಲಕ್ಷಣಗಳು. ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಸೊಳ್ಳೆಗಳ ಕಡಿತದಿಂದ ಬರುವ ಕಾಯಿಲೆಗಳಾಗಿವೆ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರು ಸೊಳ್ಳೆ ನಿರೋಧಕಗಳನ್ನು ಬಳಸಬೇಕೆಂದರು.
ಪ್ರತಿ ದಿನ ಬಳಸುವಂತಹ ನೀರಿನ ತೊಟ್ಟಿ ಡ್ರಂಗಳಲ್ಲಿರುವ ನೀರನ್ನು ಶುದ್ಧಿ ಮಾಡಬೇಕು. ಇದರಿಂದ ಸೊಳ್ಳೆಗಳ ಸಂತಾನಾಭಿವೃದ್ಧಿಯನ್ನು ತಡೆಯಬಹುದು. ವಾರಕ್ಕೊಮ್ಮೆ ನೀರು ತುಂಬುವ ವಸ್ತುಗಳನ್ನು ತೊಳೆದು ಒಣಗಿಸಿ ಡ್ರೈ ಡೇ ಎಂದು ಆಚರಿಸಬೇಕು, ನಂತರ ನೀರು ತುಂಬಿಸಿ ಮುಚ್ಚಿಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗ ನಿರ್ವಾಹಕ, ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಬಿ.ಹೆಚ್. ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಎ. ಬಿ. ನಾರಾಯಣ ಸ್ವಾಮಿರವರು, ಕೀಟ ಶಾಸ್ತ್ರಜ್ಞರಾದ ಹೆಚ್. ಎಂ. ವೇಣು ಗೋಪಾಲ್ ರವರು ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಹೆಚ್. ರೇಣುಕಾದೇವಿ. ಆಶಾ ಮತ್ತು ಎಸ್. ಎನ್. ಆರ್. ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!