ಉದಯವಾಹಿನಿ, ಕುದೂರು: ರಾಷ್ಟ್ರೀಯ ಹೆದ್ದಾರಿ 75ರ ಹೋಬಳಿಯ ಮರೂರು ಹ್ಯಾಂಡ್ ಪೋಸ್ಟ್ ಬಳಿ ಶುಕ್ರವಾರ ರಾತ್ರಿ ರಸ್ತೆ ಉಬ್ಬು (ಹಂಪ್ಸ್) ದಾಟುತ್ತಿದ್ದ ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗೋವಿನಕೆರೆ ಗ್ರಾಮದ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಹಾಗೂ ಗೂಡ್ಸ್ ಆಟೊದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಪಘಾತದಲ್ಲಿ ಒಟ್ಟು ನಾಲ್ಕು ವಾಹನ ಜಖಂಗೊಂಡಿವೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆಉಬ್ಬು ಬಳಿ ನಿಧಾನವಾಗಿ ಹೊರಟಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಹಿಂದಕ್ಕೆ ತಿರುಗಿದೆ. ಆಗ ಬಸ್ ಉಜ್ಜಿಕೊಂಡು ಹೋಗಿ ಮುಂದಿದ್ದ ಮತ್ತೊಂದು ಕಾರು ಹಾಗೂ ಗೂಡ್ಸ್ ಆಟೊಗೆ ಡಿಕ್ಕಿ ಹೊಡೆದಿದೆ.
