ಉದಯವಾಹಿನಿ, ಹೊಸಪೇಟೆ: ವಿಜಯನಗರ ಜಿಲ್ಲೆಯ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಕುಸಿತವಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಫಲಿತಾಂಶ ಕುಸಿತಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ?
ಪ್ರತಿ ತಿಂಗಳ ಸಭೆಗಳಲ್ಲಿ ಏನು ಸೂಚನೆ ನೀಡಿದ್ದೀರಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಮತ್ತು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರನ್ನು ಪ್ರಶ್ನಿಸಿದರು.’ಶಿಕ್ಷಣ ವ್ಯವಸ್ಥೆ ಅತ್ಯಂತ ಕೆಟ್ಟಿದೆ. ಇದನ್ನು ಸರಿಯಾಗಿ ಸುಧಾರಿಸದಿದ್ದರೆ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ. ಮಕ್ಕಳ ಭವಿಷ್ಯ ಏನಾಗಬೇಕು? ಇದರಲ್ಲಿ ಮಕ್ಕಳ ತಪ್ಪಿಲ್ಲ. ಡಿಡಿಪಿಐ, ಬಿಇಒ ಮತ್ತು ಶಿಕ್ಷಕ ಸಮೂಹ ಇದರ ಹೊಣೆ ಹೊರಬೇಕಲ್ಲವೇ’ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ? ಶೈಕ್ಷಣಿಕ ವಾತಾವರಣ ಮತ್ತು ಊಟ, ವ್ಯವಸ್ಥೆಯ ಗುಣಮಟ್ಟವನ್ನು ಎಷ್ಟು ಬಾರಿ ಪರಿಶೀಲಿಸಿದ್ದೀರಿ? ರಾಜ್ಯ ಸರಾಸರಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಡಿಮೆ ಆಗಿದ್ದು ಏಕೆ ? ಯಾವ ವಿಷಯಗಳಲ್ಲಿ ದುರ್ಬಲ ಇದೆ ಆ ವಿಷಯಗಳಲ್ಲಿ ಪ್ರತ್ಯೇಕ ಕೋಚಿಂಗ್ ವ್ಯವಸ್ಥೆ ಮಾಡಿದ್ದೀರಿ? ಎಷ್ಟು ಮಂದಿ ವಿದ್ಯಾರ್ಥಿಗಳು ರಾತ್ರಿ ಹಾಸ್ಟೆಲ್ಗಳಲ್ಲೇ ಉಳಿಯುತ್ತಾರೆ? ಎಂದು ಪ್ರಶ್ನಿಸಿ ಯಾವ ಯಾವ ಅಧಿಕಾರಿ ಯಾವ ಯಾವ ಹಾಸ್ಟೆಲ್ಗಳಲ್ಲಿ ಬೇಟಿ ನೀಡಿದ್ದೀರಿ ? ಭೇಟಿ ನೀಡಿದ್ದರೂ ಇನ್ನೂ ಸಮಸ್ಯೆಗಳು ಏಕೆ ಉಳಿದಿವೆ ಎಂದ ಮುಖ್ಯಮಂತ್ರಿ ಪ್ರಶ್ನಿಸಿದರು. ಎಸ್ಟಿ ಹಾಸ್ಟೆಲ್ಗಳಲ್ಲಿ, ಕ್ರೈಸ್ ಹಾಸ್ಟೆಲ್ಗಳಲ್ಲಿ ಅಗತ್ಯ ನಾಗರಿಕ ಸೌಲತ್ತುಗಳನ್ನು ಒದಗಿಸದ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರಿಗೆ ಲೋಕಾಯುಕ್ತ ದಿಂದ ನೋಟಿಸ್ ನೀಡಿರುವ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
