ಉದಯವಾಹಿನಿ, ಮಾಗಡಿ: ‘ಚನ್ನಪಟ್ಟ ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಹಾಗೂ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಭಿಕ್ಷೆ ಕೇಳುತ್ತೇವೆ. ಚುನಾವಣೆಯನ್ನು ಜನರ ತೀರ್ಮಾನಕ್ಕೆ ಬಿಡುತ್ತೇವೆ’ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೇನೊ ಶಕ್ತಿ ಇದೆ ಎಂದು ಕ್ಷೇತ್ರದ ಉಸ್ತುವಾರಿಯನ್ನು ವಹಿಸಿದ್ದಾರೆ.
ಚುನಾವಣೆಗೆ ಇನ್ನೂ ಕೂಡ ಬೇಕಾದಷ್ಟು ಸಮಯವಿದೆ. ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ನಾವು ದೊಡ್ಡಮಟ್ಟದಲ್ಲಿ ಸೋತಿದ್ದೇವೆ. ಎರಡ್ಮೂರು ಲಕ್ಷ ಮತಗಳ ಅಂತರದಲ್ಲಿ ಸೋತಿರು ನಮಗಿಲ್ಲಿ ದೊಡ್ಡ ಶಕ್ತಿ ಇದೆ ಎಂದು ಹೇಳಿಕೊಳ್ಳುವಂತಿಲ್ಲ’ ಎಂದರು.
‘ಬೆಂಗಳೂರು ಗ್ರಾಮಾಂತರದ ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಕೈ ಹಿಡಿದಿರುವುದು ಆಶಾದಾಯಕ ಬೆಳವಣಿಗೆ. ವಿಧಾನಸಭಾ ಚುನಾವಣೆಯಲ್ಲಿ 15 ಸಾವಿರವಿದ್ದ ಮತ ಗಳಿಕೆ 85 ಸಾವಿರಕ್ಕೆ ಏರಿಕೆಯಾಗಿದೆ. ಹಾಗಾಗಿ, ಜನರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ಹೋಗುತ್ತೇವೆ. ಆದರೂ, ನಾವು ದೊಡ್ಡ ನಾಯಕರ ವಿರುದ್ಧ ಸ್ಪರ್ಧಿಸಬೇಕಾಗಿದೆ. ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ತಿಳಿಸಿದರು.
‘ಡಿಕೆಶಿ ರಾಜಕೀಯ ಅಧ್ಯಾಯ ಚನ್ನಪಟ್ಟಣದಲ್ಲಿ ಅಂತ್ಯ’ ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾರ ರಾಜಕೀಯ ಎಲ್ಲಿ ಮುಗಿಯಲಿದೆ ಎಂದು ಅವರಿಗೇ ಕರೆ ಮಾಡಿ ಕೇಳಬೇಕು. ಅವರು ಹಿಂದೆ ಸರ್ಕಾರ ರಚನೆ ಮಾಡಿದ್ರು, ಆನಂತರ ಉರುಳಿಸಿದ್ರು, ಸಿ.ಎಂ ಅಭ್ಯರ್ಥಿಯಾಗಿ ಈ ಭಾಗದ ಒಕ್ಕಲಿಗ ನಾಯಕರೂ ಆದರು. ಯೋಗೇಶ್ವರ್ ವೇಗ ಯಾವ ರೀತಿ ಇದೆ ಅಂತ ನಾನು ನೋಡುತ್ತಿದ್ದೇನೆ. ಆತ್ಮೀಯರಾದ ಅವರು ಇದೇ ಸ್ಪೀಡ್ನಲ್ಲಿ ಹೋಗಲಿ’ ಎಂದು ವ್ಯಂಗ್ಯವಾಡಿದರು.
