ಉದಯವಾಹಿನಿ, ವಿಜಯಪುರ: ‘ಸೇವಾ ಮನೋಭಾವದ ಯುವಕರು ಸಂಘಟಿತರಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ’ ಎಂದು ಡಾ ಸುರೇಶ ಕಾಗಲಕರ ರೆಡ್ಡಿ ಹೇಳಿದರು. ಅವರು ಶನಿವಾರದಂದು ನಗರದ ಶಿವಶರಣ ಹರಳಯ್ಯ ಅಂಧರ ಸಂಸ್ಥೆಯಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪಿ ಎಸ್ ಐ ಸುರೇಶ ಮಂಟೂರ ಕೊಡಮಾಡಿದ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಬದುಕಿನಲ್ಲಿ ಸಾಕಷ್ಟು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅದರಂತೆ ಭಾರತ ಯುವ ವೇದಿಕೆಯು ಕೂಡ ಯುವ ಮನಸ್ಸುಗಳಿಂದ ಸಾಮಾಜಿಕ ಕಳಕಳಿಯ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ಸಮವಸ್ತ್ರವನ್ನು ಅಂಧ ಮಕ್ಕಳಿಗೆ ಉಚಿತವಾಗಿ ವಿತರಿಸುವ ಮೂಲಕ ಪಿ ಎಸ್ ಐ ಸುರೇಶ ಮಂಟೂರ ಔದಾರ್ಯ ಮೆರೆದಿದ್ದಾರೆ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎನ್ನುವ ಮಾತನ್ನು ಎಲ್ಲರೂ ಪಾಲಿಸಿದರೆ ಸಂಕಷ್ಟದಲ್ಲಿರುವವರಿಗೆ ನೆರವಾದಂತದಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಜಾಧವ ಮಾತನಾಡಿ, ಅಂಧ ಮಕ್ಕಳನ್ನು ಸಾಕಿ ಸಲಹುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸಮಾಜದ ಕಣ್ಣು ತೆರೆಸುವ ಕಾರ್ಯ ಈ ಭಾರತ ಯುವ ವೇದಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಮಾಜಮುಖಿಯಾಗಿ ಕೈಜೋಡಿಸಬೇಕು ಎಂದು ಹೇಳಿದರು.
ವಿಜಯ ಟಾಯರ್ಸ್ ಮಾಲೀಕ ಪ್ರಕಾಶ ತೊಸ್ನಿವಾಲ, ಅಂಧ ಮಕ್ಕಳ ವಸತಿ ಶಾಲೆಯ ಮುಖ್ಯ ಶಿಕ್ಷಕ ಶಿವಾಜಿ ಹರಣಶಿಕಾರಿ ರೋಣಿಹಾಳ ಸರ್,ಮಂಜುನಾಥ್ ಹೋನಕೇರಿ, ಅನಿಲ್ ತಳವಾರ, ಶಂಕರ ಶಾಲಾ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂತೋμï ಹೆಗಡೆ ನಿರೂಪಿಸಿದರು, ಸತೀಶ್ ನಾಗಠಾಣ ಸ್ವಾಗತಿಸಿದರು, ಬಿರು ಗಾಡುವೆ ವಂದಿಸಿದರು.
