ಉದಯವಾಹಿನಿ, ನಾಗಮಂಗಲ: ತಾಲ್ಲೂಕಿನ ಕೋಡಿಕಲ್ಲು ಗ್ರಾಮದ ಹೊರವಲಯದ ಜಮೀನಿನಲ್ಲಿ ಹೆಬ್ಬಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಉರಗತಜ್ಞರ ಸಹಾಯದಿಂದ ರಕ್ಷಿಸಿದ್ದಾರೆ.ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕೋಡಿಕೊಪ್ಪಲು ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ 9 ಗಂಟೆ ವೇಳೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.ನಂತರ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಅಧಿಕಾರಿಗಳು ಉರಗತಜ್ಞ ಆನಂದ್ ಅವರನ್ನು ಸ್ಥಳಕ್ಕೆ ಕರೆತಂದು 10 ಗಂಟೆ ಸುಮಾರಿಗೆ ಹೆಬ್ಬಾವನ್ನು ರಕ್ಷಿಸಿದ್ದಾರೆ. ಗ್ರಾಮದ ಪಕ್ಕದಲ್ಲಿರುವ ಕೋಣನಕುಂಟೆ ಅರಣ್ಯ ಪ್ರದೇಶದಿಂದ ಹೆಬ್ಬಾವು ಗ್ರಾಮದ ಕಡೆಗೆ ದಾರಿ ತಪ್ಪಿ ಬಂದಿದೆ. ಜೊತೆಗೆ ಹೆಬ್ಬಾವು 12 ಅಡಿ ಉದ್ದವಿದ್ದು, ಸುಮಾರು 5-6 ವರ್ಷ ವಯಸ್ಸಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣೆ ಮಾಡಿದ ಹೆಬ್ಬಾವನ್ನು ಮೇಲುಕೋಟೆ ಮೀಸಲು ಅರಣ್ಯಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಬಿಟ್ಟಿದ್ದಾರೆ.
ಕಾರ್ಯಾಚರಣೆ ವೇಳೆ ಆರ್.ಎಫ್.ಒ ಮಂಜುನಾಥ್, ಡಿ.ಆರ್.ಎಫ್.ಒ ಪ್ರಕಾಶ್, ನರಸಿಂಹ, ಅರಣ್ಯ ರಕ್ಷಕ ದಿಲೀಪ್, ಸಿಬ್ಬಂದಿ ಇದ್ದರು.
