ಉದಯವಾಹಿನಿ, ಬೆಂಗಳೂರು: ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡುವ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.
ಜೆಪಿಭವನದಲ್ಲಿಂದು ಎಚ್‌.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಜೆಡಿಎಸ್‌‍ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅವರು ಲೋಕಸಭೆಗೆ ಚುನಾಯಿತರಾದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಶಾಸಕಾಂಗ ಪಕ್ಷದ ಸ್ಥಾನ ತೆರವಾಗಿದೆ. ಆ ಸ್ಥಾನಕ್ಕೆ ಹಿರಿಯ ಶಾಸಕರಾದ ಜಿ.ಟಿ.ದೇವೇಗೌಡರು, ಎಚ್‌.ಡಿ. ರೇವಣ್ಣ ಸೇರಿದಂತೆ ಹಲವರ ಹೆಸರು ಗಳು ಕೇಳಿಬಂದಿವೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ನೇಮಕ ಮಾಡುವವರು ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ.
ಮಳೆಗಾಲದ ಅಧಿವೇಶನದಲ್ಲಿ ಯಾವ ರೀತಿ ಹೋರಾಟ ನಡೆಸಬೇಕು, ಜನರ ಸಮಸ್ಯೆಗಳನ್ನು ಹೇಗೆ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಕುಮಾರಸ್ವಾಮಿ ಶಾಸಕರಿಗೆ ಮಾರ್ಗ ದರ್ಶನ ಮಾಡಿದ್ದಾರೆ.ಪೂರ್ವ ಸಿದ್ದತೆ ಮಾಡಿಕೊಂಡು ಅಧಿವೇಶನದಲ್ಲಿ ಭಾಗಿಯಾಗಬೇಕು, ಜನರು ಅಧಿವೇಶನದಲ್ಲಿ ನಾವು ನಡೆಸುವ ಹೋರಾಟ ಬೆಳಕು ಚೆಲ್ಲುವ ವಿಚಾರವನ್ನು ಗಮನಿಸುತ್ತಾರೆ.
ಕ್ಷೇತ್ರದ ಸಮಸ್ಯೆಗಳಿಗೂ ಆದ್ಯತೆ ನೀಡಬೇಕು, ಪ್ರಶ್ನೋತ್ತರ ಅವಧಿ ಮಹತ್ತರವಾದುದು ಎಲ್ಲರೂ ತಪ್ಪದೇ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕು, ಸಮರ್ಥವಾಗಿ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.ಸದನದಲ್ಲಿ ವಿಷಯಾಧಾರಿತ ಹೋರಾಟ ಮಾಡಬೇಕು, ಪಕ್ಷ ಸಂಘಟನೆಗೂ ಒತ್ತು ಕೊಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಸಭೆಯಲ್ಲಿ ಶಾಸಕರಾದ ಸುರೇಶ್‌ ಬಾಬು, ವೆಂಕಟಶಿವಾ ರೆಡ್ಡಿ, ಸಮೃದ್ದಿ ಮಂಜುನಾಥ್‌, ಸ್ವರೂಪ್‌, ಎಂ.ಪಿ.ಕೃಷ್ಣಪ್ಪ, ಶಾರದಾ ಪುರ್ಯಾ ನಾಯಕ್‌, ಹರೀಶ್‌ಗೌಡ, ನೇಮಿರಾಜ ನಾಯಕ್‌, ಜವರಾಯಿಗೌಡ, ತಿಪ್ಪೇಸ್ವಾಮಿ, ಕರೆಮ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಜಿ ಶಾಸಕರಾದ ವೈ.ಎಸ್‍.ವಿ.ದತ್ತ, ಬಂಡೆಪ್ಪ ಕಾಶಂಪುರ್‌, ವೆಂಕಟರಮಣ ನಾಡಗೌಡ, ಅಲ್‌ಕೋಡ್‌ ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ರಮೇಶ್‌ ಗೌಡ ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!