ಉದಯವಾಹಿನಿ, ಶಿವಮೊಗ್ಗ: ರಾಜ್ಯಾದ್ಯಂತ ಡೆಂಘೀ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝೀಕಾ ವೈರಸ್ಗೆ ವೃದ್ಧನೊಬ್ಬ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.ಮಹಾರಾಷ್ಟ್ರದಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಎಲ್ಲ ರಾಜ್ಯಗಳಿಗೂ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ಸೂಚನೆ ನೀಡಿದ ಬೆನ್ನಲ್ಲೇ ವೃದ್ದರೊಬ್ಬರು ಸಾವನ್ನಪ್ಪಿರುವುದು ಕಳವಳ ಉಂಟು ಮಾಡಿದೆ. ಶಿವಮೊಗ್ಗದ ಗಾಂಧಿನಗರದ 74 ವರ್ಷದ ವೃದ್ದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಜೂ.19ರಂದು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೊಡಿಸಿ ಗುರುವಾರ ಕುಟುಂಬದವರು ಅವರನ್ನು ಮನೆಗೆ ಕರೆದೊಯ್ದಿದ್ದರು. ಆದರೆ ನಿನ್ನೆ ಮನೆಯಲ್ಲಿ ಮೃತಪಟ್ಟಿದ್ದಾರೆ.ಝೀಕಾ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆ ಕಟ್ಟೆಚ್ಚರಕ್ಕೆ ಸೂಚನೆ ನೀಡಿದೆ.
