ಉದಯವಾಹಿನಿ, ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೊಲೀಸ್‌‍ ಹೆಸರಲ್ಲಿ ಕರೆ ಮಾಡಿ ಧಮ್ಕಿ ಹಾಕಿದ್ದರಿಂದ ನೊಂದ ಯುವಕ ಆತಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನೆಲಮಂಗಲದ ಎಬಿಬಿ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿರುವ ಪ್ರಮೋದ್‌ ಒಂದು ವರ್ಷದಿಂದ ದೀಪಿಕಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ನಡುವೆಯೂ ದಾಬಸ್‌‍ಪೇಟೆಯ ಬಳಿಯ ಉದ್ದಾನೇಶ್ವರ ಬೆಟ್ಟದಲ್ಲಿ ನಾಲ್ಕೈದು ದಿನಗಳ ಹಿಂದಷ್ಟೇ ಮದುವೆಯಾಗಿದ್ದಾರೆ.
ನಂತರ ದಾಬಸ್‌‍ಪೇಟೆ ಪೊಲೀಸ್‌‍ ಠಾಣೆಗೆ ಹೋಗಿ ನವಜೋಡಿ ರಕ್ಷಣೆಗೆ ಮೊರೆಹೋಗಿದ್ದಾರೆ. ಪೊಲೀಸ್‌‍ ಸಮುಖದಲ್ಲಿ ಇವರಿಬ್ಬರ ವಿಚಾರಣೆ ನಡೆಸಿ, ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ರಾಜಿ ಪಂಚಾಯ್ತಿ ನಡೆದು, ಯುವತಿ ತನ್ನ ಮನೆಗೆ ಹೋಗಿದ್ದಾಳೆ.
ಇಷ್ಟಕ್ಕೆ ಸುಮನಾಗದ ಖಾಸಗಿ ವ್ಯಕ್ತಿ ಸುರೇಶ ಎಂಬಾತ ಪೊಲೀಸ್‌‍ ಸಬ್‌ಇನ್‌ಸ್ಪೆಕ್ಟರ್‌ ಹೆಸರಲ್ಲಿ ಯುವಕನಿಗೆ ಫೋನ್‌ ಮಾಡಿ, ಬೆದರಿಕೆ ಹಾಕಿ, ಯುವತಿಯ ಬ್ಯಾಗ್‌ ತಂದುಕೊಡದಿದ್ದರೆ ನಿನ್ನ ಮನೆಗೆ ಪೊಲೀಸ್‌‍ ಜೀಪು ಬರುತ್ತದೆ ಎಂದು ಹೆದರಿಸಿದ್ದಾನೆ.ಇದರಿಂದ ಗಾಬರಿಯಾದ ಪ್ರಮೋದ್‌, ಮನೆ ಬಳಿ ಪೊಲೀಸ್‌‍ ಜೀಪು ಬಂದರೆ ನನ್ನ ಕುಟುಂಬದವರಿಗೆ ತೊಂದರೆಯಾಗುತ್ತದೆ ಎಂದು ಹೆದರಿ ವಿಷ ಸೇವಿಸಿ ಆತಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಮನೆಯವರು ಪ್ರಮೋದ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ.ವಿಷಯ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ಯುವಕನಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಪ್ರಮೋದ್‌ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ತಕ್ಷಣ ದೀಪಿಕಾ ತನ್ನ ಮನೆಯಿಂದ ಆಸ್ಪತ್ರೆಗೆ ಬಂದು ನಾಲ್ಕು ದಿನಗಳಿಂದ ಆತನ ಜೊತೆಯಲ್ಲಿಯೇ ಇದ್ದಾಳೆ.ಇದೀಗ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಮೋದ್‌ನಿಂದ ಹೇಳಿಕೆ ಪಡೆದ ನಂತರ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!