ಉದಯವಾಹಿನಿ, ಬಳ್ಳಾರಿ: ನಗರದ ಪಾಲಿಕೆ ಸದಸ್ಯ ವಿ.ಕುಬೇರ ಮತ್ತವರ ಸಂಬಂಧಿಗಳ ಮೇಲೆ ಕೋಟೆ ಪ್ರದೇಶದ ರವಿ ಮತ್ತಿತರರು ಸೇರಿ ನಿನ್ನೆ ಸಂಜೆ ಹಲ್ಲೆ ನಡೆದಿರುವ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಸಂಜೆ ಮೇಯರ್ ಕೊಠಡಿಯಲ್ಲಿ ವಿಷಯಗಳನ್ನು ಚರ್ಚಿಸುವಾಗ ರವಿ, ಗೋವಿಂದ ಅವರು ಬಂದು ಕುಳಿತಿದ್ದಾರೆ. ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ನಂತರ ಕೆಳಗೆ ಬಂದಾಗ ಕೂಡ ಕುಬೇರ ಅವರ ಮೇಲೆ ಹಲ್ಲೆ ಮಾಡಿದರಂತೆ. ಅಲ್ಲಿದ್ದ ಕೆಲವರು ಬಿಡಿಸಿಕೊಂಡ ಮೇಲೆ ಚಿಕಿತ್ಸೆಗೆಂದು ಟ್ರಾಮಾಕೇರ್ ಸೆಂಟರ್ ಗೆ ಹೋದ ಮೇಲೆ ಅಲ್ಲಿಗೂ ಹೋಗಿ ಮತ್ತೆ ಕುಬೇರ, ಅವರ ಸಂಬಂಧಿಗಳಾದ ನಾಗರಾಜ, ವೀರೇಂದ್ರ ಅವರ ಮೇಲೆ ಹಲ್ಲೆ ಮಾಡಿದಾಗ ಆಸ್ಪತ್ರೆಯಲ್ಲಿದ್ದ ಜನ ಸಿಬ್ಬಂದಿ
ಬಿಡಿಸಿಕೊಂಡಿದ್ದಾರೆಂದು ಗಾಂಧಿನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ರವಿಕುಮಾರ್, ಗೋವಿಂದ, ಚಿರಂಜೀವಿ ಮತ್ತಿತರರು ಎಂದು ಉಲ್ಲೇಖಿಸಿದೆ. ಜಗನ್, ಕಾಟೆಗುಡ್ಡ ಮಧು, ಸೂರಿ ಸೇರಿದಂತೆ 40 ಕ್ಕೂ ಹೆಚ್ಚು ಜನ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ.
