ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ಬಂದಿದ್ದ ಜಮೀನು ಮುಡಾಗೆ ಸೇರಿದ್ದಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಮುಖ್ಯಮಂತ್ರಿಯವರ ಪತ್ನಿಗೆ ದಾನವಾಗಿ ಕೃಷಿ ಜಮೀನು ಬಂದಿರುವ ಮಾಹಿತಿ ಇದೆ. ಆದರೆ 1997ರಲ್ಲೇ ಜಮೀನು ಭೂಸ್ವಾಧೀನವಾಗಿದ್ದು, ಮುಡಾದಿಂದ ನ್ಯಾಯಾಲಯಕ್ಕೆ 3.16 ಲಕ್ಷ ರೂ. ಹಣ ಪಾವತಿಯಾಗಿದೆ ಎಂದರು.
ಮುಡಾ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹಣ ಪಾವತಿಸಿದ ಮೇಲೆ ಜಮೀನು ಮೂಡಾ ಸ್ವತ್ತಾಗಿದೆ. 2004ರಲ್ಲಿ ದೇವರಾಜು ಎಂಬುವರಿಂದ ಮಲ್ಲಿಕಾರ್ಜುನ ಸ್ವಾಮಿ ಎಂಬುವರು ಖರೀದಿಸಿರುವ ಮಾಹಿತಿ ಇದೆ. ನಂತರ ಆ ಜಮೀನನ್ನ 2005ರಲ್ಲಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ. ಆಗ ಉಪ ಮುಖ್ಯಮಂತ್ರಿಯಾಗಿದ್ದವರೇ ಸಿದ್ದರಾಮಯ್ಯ ಅವರೇ ಎಂದು ಹೇಳಿದರು.ನಿಂಗ ಅಲಿಯಾಸ್ ಜವರ ಎಂಬ ವ್ಯಕ್ತಿ ಹೆಸರಿನಲ್ಲಿ 1992-93ರಲ್ಲಿ 3 ಎಕರೆ 16 ಗುಂಟೆ ಜಮೀನು ಪೌತಿ ಖಾತೆಯಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಅನ್ನು ಸತ್ತ ವ್ಯಕ್ತಿ ಹೆಸರಿನಲ್ಲಿ ಮಾಡಲಾಗಿದೆ. ಆಗ ಉಪಮುಖ್ಯಮಂತ್ರಿಯಾಗಿದ್ದವರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಪತ್ನಿಯ ತಮ ದಾನವಾಗಿ ಈ ಜಮೀನನ್ನು ನೀಡಿರುವುದಾಗಿ ಹೇಳಲಾಗಿದೆ. ಆದರೆ ಮುಡಾ ಜಮೀನು ದೇವರಾಜು ಅವರಿಗೆ ಹೇಗೆ ಬಂತು? ಸತ್ತ ವ್ಯಕ್ತಿಗೆ ಡಿನೋಟಿಫಿಕೇಷನ್ ಹೇಗಾಯ್ತು ಎಂಬ ವಿವರವನ್ನು ಮುಖ್ಯಮಂತ್ರಿ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
