ಉದಯವಾಹಿನಿ, ಬೆಂಗಳೂರು: ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಬಹುಕೋಟಿ ಅಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೇ ಇದರ ಕಿಂಗ್ಪಿನ್. ಅವನನ್ನು ಏಕೆ ಬಂಧಿಸಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಅಂದಾಜು ನಾಲ್ಕು ಸಾವಿರ ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಇದರ ಸೂತ್ರಧಾರ ಭೈರತಿ ಸುರೇಶ್. ಅವನು ಏಕೆ ಹೊರಗಡೆ ಇದ್ದ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸರ್ಕಾರ ಈತನನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದರು.
ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಒಬ್ಬ ಸಚಿವರು ಈಗಾಗಲೇ ಜೈಲು ಪಾಲಾಗಿದ್ದಾರೆ. ಇದರಲ್ಲಿ 189 ಕೋಟಿ ಹಗರಣ ಆಗಿದೆ. ಅದಕ್ಕಾಗಿ ಸಚಿವರ ರಾಜೀನಾಮೆ ಪಡೆದು ಅವರನ್ನು ಇ.ಡಿ ಬಂಧಿಸಿದೆ. ಹಾಗಾದರೆ ಭೈರತಿ ಸುರೇಶ್ ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ವಾಲೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಒಂದು ನ್ಯಾಯ, ಮುಡಾಕ್ಕೆ ಇನ್ನೊಂದು ನ್ಯಾಯವೇ? ಮಾಜಿ ಸಚಿವ ಬಿ.ನಾಗೇಂದ್ರ ಜೈಲಿಗೆ ಹೋಗುವುದಾದರೆ ಸಾವಿರಾರು ಕೋಟಿ ಅಕ್ರಮ ಎಸಗಿರುವ ಭೈರತಿ ಸುರೇಶ್ ಕೂಡ ಜೈಲಿಗೆ ಹೋಗಬೇಕಲ್ಲವೇ ಎಂದು ವಿಶ್ವನಾಥ್ ಹರಿಹಾಯ್ದರು.
