ಉದಯವಾಹಿನಿ, ಕೊರಟಗೆರೆ: ವೃದ್ಧಾಪ್ಯ ಮಾಸಾಶನ ಹೆಸರಿನಲ್ಲಿ ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಯಾಮಾರಿಸಿ ಆಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಕೊರಟಗೆರೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರುಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿ ಗ್ರಾಮದ ನಿವಾಸಿ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ (40) ಬಂಧಿತ ಆರೋಪಿ.
ಡಿಸಿಸಿ ಬ್ಯಾಂಕ್ ಬಳಿ ವೃದ್ಧೆಯೊಬ್ಬರಿಗೆ ಡ್ರಾಪ್ ನೀಡುವ ನೆಪದಲ್ಲಿ ಬಂದು ಆಕೆಯ ಕೊರಳಲ್ಲಿ ಚಿನ್ನದ ಸರವನ್ನು ನೋಡಿ ಕೊರಳಲ್ಲಿ ಚಿನ್ನದ ಸರ ಇದ್ದರೆ ವೃದ್ಧಾಪ್ಯ ವೇತನ ಸ್ಥಗಿತಗೊಳ್ಳಲಿದೆ ಎಂದು ನಂಬಿಸಿ ಹೆಂಗಸರುಗಳಿಂದ ಚಿನ್ನಾಭರಣ ಬಿಚ್ಚಿಸಿಕೊಳ್ಳುತ್ತಿದ್ದ ಖತರ್ನಾಕ್ ಕಳ್ಳ ಅರ್ಜಿ ತರುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಈತನನ್ನು ಬೆನ್ನತ್ತಿದ ಕೊರಟಗೆರೆ ಪೊಲೀಸ್ ತಂಡ ಸಿಸಿ ಕ್ಯಾಮೆರಾ ಪುಟೇಜ್‍ಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ಮುಂಭಾಗ ಟ್ರಾಫಿಕ್‍ನಲ್ಲಿ ರಸ್ತೆಯಲ್ಲಿಯೇ ಹಿಡಿಯುವಾಗ ದೊಡ್ಡ ಹೈಡ್ರಾಮ ನಡೆದು ಆರೋಪಿ ಮಂಜ ಪೊಲೀಸರ ಮೇಲೆಯೇ ಬೈಕ್ ಹತ್ತಿಸಲು ಮುಂದಾಗಿ ನಂತರ ಟ್ರಾಫಿಕ್ ಪೊಲೀಸರ ಸಹಕಾರದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೋಸ್ಟ್ ಆಫೀಸ್ ಹಾಗೂ ಕೆಲವು ಬ್ಯಾಂಕುಗಳ ಮುಂದೆ ವೃದ್ಧಾಪ್ಯ ವೇತನಕ್ಕೆ ಬರುವ ವೃದ್ಧೆಯರನ್ನು ಟಾರ್ಗೆಟ್ ಮಾಡಿಕೊಂಡು ಮಂಜುನಾಥ್ ಹಣ ಬಿಡಿಸಿಕೊಡುವ ನೆಪದಲ್ಲಿ ಮಹಿಳೆಯರ ಜೊತೆ ಸೇರಿ ಸಲಿಗೆ ಬೆಳೆಸಿ ಹಳೆ ಪರಿಚಯದರಂತೆ ವರ್ತಿಸಿ ಹಣ ಬಿಡಿಸಿಕೊಡುವುದಾಗಿ ಸ್ಲಿಪ್ ಬರೆದುಕೊಂಡು ನೀವು ಕೊರಳಿಗೆ ಬಂಗಾರದ ಸರಗಳನ್ನು ಹಾಕಿಕೊಂಡು ಹೋದರೆ ವೃದ್ಧಾಪ್ಯ ವೇತನ ನಿಲ್ಲಿಸುತ್ತಾರೆ ಎಂದು ವೃದ್ದೆಯರ ಬಳಿ ಚಿನ್ನದ ಸರಗಳನ್ನು ಬಿಚ್ಚಿಸಿಕೊಂಡು ಸಿನಿಮೀಯ ರೀತಿಯಲ್ಲಿ ಕ್ಷಣಾರ್ಧದಲ್ಲಿ ಮರೆಯಾಗುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!