ಉದಯವಾಹಿನಿ, ಹುಬ್ಬಳ್ಳಿ: ನನ್ನ ಮಕ್ಕಳಿಂದ ಮರ್ಯಾದೆ ಹೋಗುತ್ತಿದೆ. ಅವರನ್ನು ಗುಂಡಿಟ್ಟು ಕೊಂದುಬಿಡಿ….ಕಮಿಷ್ನರ್ ಸರ್ ಎಂದು ತಂದೆಯೊಬ್ಬ ಕಣ್ಣೀರಿಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ರೌಡಿ ಶೀಟರ್ ಅಫ್ತಾಬ್ ಕರಡಿಗುಡ್ಡ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ರೌಡಿಗಳಾದ ಜಾವೂದ್ ಬೆಫಾರಿ ಹಾಗೂ ಅಪ್ತಾಬ್ ಕರಡಿಗುಡ್ಡ ಗ್ಯಾಂಗ್ ಗಳ ನಡುವೆ ಕಾಳಗ ನಡೆದಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಫ್ತಾಬ್, ಜಾವೂದ್ ಮೇಲೆ ದಾಳಿ ನಡೆಸಿದ್ದ. ಕೊಲೆ ಮಾಡಲು ಯತ್ನಿಸಿ ಬಳಿಕ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಅಫ್ತಾಬ್ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದರು.
ಬಳಿಕ ರೌಡಿಶೀಟರ್ ಮನೆ ಮೇಲೆ ಕಮೀಷ್ನರ್ ಶಶಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಆರೋಪಿಯ ತಂದೆ ಮಹಮ್ಮದ್ ಗೌಸ್, ತನ್ನ ಮಕ್ಕಳಿಬ್ಬರೂ ದಾರಿ ತಪ್ಪಿದ್ದಕ್ಕೆ ಕಣ್ಣೀರಿಟ್ಟಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ಮಕ್ಕಳಿಂದ ಮಾನ ಮರ್ಯಾದೆ ಹೋಗಿದೆ. ಅವರನ್ನು ಗುಂಡಿಟ್ಟು ಕೊಂದುಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಪೊಲೀಸ್ ಕಮಿಷ್ನರ್ ಶಶಿಕುಮಾರ್, ಮಕ್ಕಳಿಗೆ ನೀವು ಬುದ್ಧಿ ಹೇಳಿ ಇಲ್ಲವಾದರೆ ನಾವೇ ಬುದ್ಧಿ ಹೇಳಿ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!