ಉದಯವಾಹಿನಿ, ದೇವನಹಳ್ಳಿ: ಹಲವು ದಲಿತ ಮುಖಂಡರ ಹೋರಾಟ, ರಾಜಕೀಯ ವ್ಯಕ್ತಿಗಳ ಇಚ್ಛಾ ಶಕ್ತಿಯಿಂದ ಪಟ್ಟಣದ ಗಿರಿಯಮ್ಮ ಸರ್ಕಲ್ ಬಳಿ ನಿರ್ಮಾಣ ಆಗಿರುವ ಬಹುಕೋಟಿ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಜಿಲ್ಲೆ ಸೇರಿದಂತೆ ತಾಲ್ಲೂಕು ಮಟ್ಟದ ಹಲವಾರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಈ ಭವನದ ವೇದಿಕೆ ಮೇಲೆ ಹಾಸಿರುವ ಮರದ ನೆಲಹಾಸನ್ನು ಗೆದ್ದಲು ಹುಳು ತಿಂದು, ಮಣ್ಣು ಮಾಡುತ್ತಿದೆ.
ವೇದಿಕೆ ಮೇಲ್ಭಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ಭಾಗ ಹಾಗೆಯೇ ಉಳಿದಿದ್ದು, ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಕಾರ್ಯಕ್ರಮ ಮಾಡಬೇಕಿರುವ ದುಸ್ಥಿತಿ ಆಯೋಜಕರದ್ದು.
ಇಡೀ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಭವನದ ಪೈಕಿ ದೇವನಹಳ್ಳಿಯ ಭವನೇ ದೊಡ್ಡದು. ಆದರೆ ಭವನದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ. ಶೌಚಾಲಯಗಳ ಟೈಲ್ಸ್ ಕಿತ್ತು ಹೊರಬಂದಿದೆ. ಸ್ವಚ್ಛತೆ ಕಾಣದೆ ದುರ್ನಾತ ಬೀರುತ್ತಿದೆ. ನೆಲ ಮಹಡಿಯಲ್ಲಿರುವ ಊಟದ ಕೊಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೇ ಪೈಪ್ಗಳು ಹೊರ ಬಂದಿದೆ.
ಭವನ ನಿರ್ಮಾಣವಾಗಿ ಆರೇಳು ವರ್ಷ ಕಳೆದಿದ್ದು, ನೆಲ ಮಹಡಿಗೆ ಸಾಗುವಾಗ ಇರುವ ಗೋಡೆಗಳು ಮಳೆ ನೀರು ಸೋರಿಕೆಯಾಗಿ ಶಿಥಿಲಾವಸ್ಥೆಗೆ ತಲುಪಿದೆ.
ಅನಧಿಕೃತ ವಿದ್ಯುತ್ ತಂತಿ ಅಳವಡಿಸಿಕೊಂಡಿರುವುದುಭವನಕ್ಕೆ ಸಂಬಂಧಿಸಿದಂತೆ ಹತ್ತಾರು ಲಕ್ಷ ವಿದ್ಯುತ್ ಬಿಲ್ ಬಾಕಿ ಇದೆ. ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇಲ್ಲಿ ಕಾರ್ಯಕ್ರಮ ನಡೆಸುವವರಿಗೆ ಜನರೇಟರ್ಗಳ ಮೂಲಕ ವಿದ್ಯುತ್ ಹರಿಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಮೊದಲೇ ತಿಳಿಸಿದ್ದರೂ ಸಾಕಷ್ಟು ಜನ ಭವನದ ಅಕ್ಕ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿ ಅಳವಡಿಸಿ ವಿದ್ಯುತ್ ಕಳ್ಳತನ ಮಾಡಲಾಗುತ್ತಿದೆ. ಕಾರ್ಯಕ್ರಮ ಮುಗಿದ ನಂತರ ತಂತಿಗಳು ಕಂಬದಲ್ಲಿಯೇ ನೇತಾಡುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
