ಉದಯವಾಹಿನಿ, ಬಾಳೆಹೊನ್ನೂರು : ಮಲೆನಾಡು ಭಾಗದಲ್ಲಿ ಅರಣ್ಯ ಒತ್ತುವರಿ ತೆರವು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಾಳೆಹೊನ್ನೂರಿನ ರಂಭಾಪುರ ಶ್ರೀಗಳಾದ ಶ್ರೀ ಡಾ.ವೀರಾಸೋಮೇಶ್ವರ ಜಗದ್ಗುರು ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಅವರು ಬೆಂಬಲ ಘೋಷಿಸಿದರು.ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ರಂಭಾಪುರಿ ಸ್ವಾಮೀಜಿ, ಬಹಳಷ್ಟು ಸಣ್ಣ ಕುಟುಂಬಗಳು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಕಟ್ಟಿಕೊಂಡಿವೆ. ಸರ್ಕಾರ ಅದನ್ನು ಕಾನೂನಿನ ಅಡಿಯಲ್ಲಿ ಸಕ್ರಮಗೊಳಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದರು.
ಕಸ್ತೂರಿರಂಗನ್ ವರದಿ ಜಾರಿಯಿಂದ ಆಗುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಅರಣ್ಯ ಸಚಿವರಿಗೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೇನೆ. ಜನರ ಹಿತಕ್ಕಾಗಿ ರಂಭಾಪುರಿ ಪೀಠವೂ
ಜನಪರ ಹೋರಾಟದಲ್ಲಿ ಭಾಗವಹಿಸಲು ಸಿದ್ಧವಿದೆ ಹಾಗೂ ಹೋರಾಟಕ್ಕೆ ನಮ ಬೆಂಬಲವಿದೆ ಎಂದರು.ರೈತರ ಹಿತಕ್ಕಾಗಿ ನಾವು ದೆಹಲಿಯವರೆಗೆ ಬಂದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಮಾತನಾಡಿದ ಶ್ರೀ ಗುಣನಾಥ ಸ್ವಾಮೀಜಿ, ಶತಮಾನಗಳಿಂದ ಪ್ರಕೃತಿ ವಿಕೋಪ ಆಗುತ್ತಿದೆ. ವಯನಾಡಿನಲ್ಲಿ ನಡೆದಿದ್ದು ಮೊದಲೇನೂ ಅಲ್ಲ. ನಗರೀಕರಣದಿಂದ ಕಾಡು ನಾಶವಾಗಿದೆಯೇ ಹೊರತು ರೈತರಿಂದ ಅಲ್ಲ. ಕಾಫಿ ಗಿಡ ಪರಿಸರಕ್ಕೆ ಪೂರಕವಾಗಿದೆ ಎಂದರು.
ತೋಟ ಮಾಡುವುದರಿಂದ ಗುಡ್ಡ ಕುಸಿಯುವುದಿಲ್ಲ. ರೈತರು ಎಲ್ಲೂ ಹಸಿರನ್ನು ನಾಶ ಮಾಡಿಲ್ಲ. ಎಲ್ಲೋ ಆದ ಘಟನೆಯನ್ನು ರೈತರ ತಲೆಗೆ ಕಟ್ಟುವುದು ಸರಿಯಲ್ಲ. ಎಲ್ಲರ ಬದುಕೂ ಹಸನಾಗಲಿ ಎಂದು ದುಡಿದು ಅನ್ನ ನೀಡುವ ರೈತನ ಬದುಕು ಈಗ ಬೀದಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇರಳದಲ್ಲಿ ಮೇಘಸ್ಫೋಟ ನಡೆದಿರುವುದು ಗುಡ್ಡದಲ್ಲೇ ಹೊರತು ಊರಿನಲ್ಲಿ ಅಲ್ಲ. ಮಠಗಳು ನಡೆಯುತ್ತಿರುವುದು ಅನ್ನದಾತರು ನೀಡುವ ಭಿಕ್ಷೆಯಿಂದಲೇ. ಒತ್ತುವರಿ ತೆರವು ವಿರುದ್ಧದ ಹೋರಾಟಕ್ಕೆ ಮಠದ ಸಂಪೂರ್ಣ ಬೆಂಬಲವಿದೆ ಎಂದರು. ಮಲೆನಾಡು ರೈತರ, ಕಾರ್ಮಿಕರ ಹಿತಾಸಕ್ತಿಗಾಗಿ ನಾವು ಹೋರಾಟಕ್ಕೆ ಸದಾ ಸಿದ್ಧ ಎಂದು ಶ್ರೀಗಳು ನುಡಿದರು.ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿನ ಕಂದಾಯ ಭೂಮಿಯನ್ನು 4(1) ನೋಟಿಫಿಕೇಷನ್ನಡಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮೂಲಕ ಮಲೆನಾಡನ್ನು ಜನರಹಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
