ಉದಯವಾಹಿನಿ, ಬೆಂಗಳೂರು: ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್​ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದಾದ ಒಂದು ವಾರದ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಇಂದು (ಮೇ 27) ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.ಗೌರವಾನ್ವಿತ ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನು ಬೋದಿಸಿದರು.ಎಚ್‌.ಕೆ ಪಾಟೀಲ್‌, ಎನ್‌ ಚಲುವನಾರಾಯಣ ಸ್ವಾಮಿ, ಕೆ. ವೆಂಕಟೇಶ್‌, ಈಶ್ವರ್‌ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ತಿಮ್ಮಾಪೂರ್‌ ರಾಮಪ್ಪ ಬಾಲಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಿವರಾಜ ತಂಗಡಗಿ, ಶರಣ ಪ್ರಕಾಶ್​ ಪಾಟೀಲ್​, ಮಂಕಾಳ ವೈದ್ಯ, ಡಿ. ಸುಧಾಕರ್‌, ಸಂತೋಷ್‌ ಲಾಡ್, ಎನ್‌.ಎಸ್‌. ಬೋಸೆರಾಜು, ಬೈರತಿ ಸುರೇಶ್, ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್ ಮತ್ತು ಬಿ.ನಾಗೇಂದ್ರ​​ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.ಡಾ.ಎಚ್‌. ಸಿ. ಮಹಾದೇವಪ್ಪ ಅವರು ಸತ್ಯ ನಿಷ್ಠೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆ.ಎನ್​. ರಾಜಣ್ಣ ಅವರು ಬುದ್ಧ, ಬಸವ, ಅಂಬೇಡ್ಕರ್​ ಹಾಗೂ ವಾಲ್ಮಿಕಿ ಮಹರ್ಷಿ ಹೆಸರಿನಲ್ಲಿ ಪ್ರಮಾಣ ಮಾಡಿದರು. ಶಿವಾನಂದ ಪಾಟೀಲ್‌ ಅವರು ಬಸವಣ್ಣನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಬಸವಣ್ಣ, ಶಿವಾಜಿ ಹಾಗೂ ಅಂಬೇಡ್ಕರ್​ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಹೀಂ ಖಾನ್‌ ಅವರು ಅಲ್ಲಾ ಹೆಸರಿನಲ್ಲಿ ಇಂಗ್ಲಿಷ್​ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕೃಷ್ಣ ಭೈರೇಗೌಡ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಯಾರ ಹೆಸರನ್ನೂ ಉಲ್ಲೇಖಸದೇ ಶ್ರದ್ಧಾಪೂರ್ವಕವಾಗಿ ದೃಢೀಕರಣ ಮಾಡುತ್ತೇನೆ ಎನ್ನುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.

Leave a Reply

Your email address will not be published. Required fields are marked *

error: Content is protected !!