ಉದಯವಾಹಿನಿ, ಮಂಡ್ಯ: ‘ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ರಾಜಕಾಲುವೆಗಳನ್ನೂ ಉಳಿಸಿಲ್ಲ. ನಿಮ್ಮ ಭೂಮಿ ಮತ್ತು ಹಣದ ದಾಹದಿಂದ ಬೆಂಗಳೂರಿನಲ್ಲಿ ಮಳೆ ಅವಾಂತರವಾಗಿದೆ. ಪುಟ್ಟೇನಹಳ್ಳಿ, ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿ ಡಾಲರ್ಸ್ ಕಾಲನಿಯಾಗಿ ಮಾಡಿದರು.
ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇವರಿಗಿಲ್ಲ. ಮಳೆ ಬಂದರೆ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ನೀರನ್ನು ಖಾಲಿ ಮಾಡ್ತಾರಾ? ನಾನು ಜಲಜೀವನ್ ಮಿಷನ್ಗಾಗಿ 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿದ್ದು, ಈಗ 110 ಹಳ್ಳಿಗೆ ನೀರು ಕೊಡ್ತೀವಿ ಅಂತ ಹೇಳಿದ್ದಾರೆ. ಅದರಲ್ಲಿ 50 ಲಕ್ಷ ಜನರಿಗೆ ನೀರು ಕೊಡುತ್ತೇವೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಲ್ಲಿ ಅಷ್ಟು ಜನ ಇರಲು ಸಾಧ್ಯನಾ? ಇದೊಂದು ನಗೆಪಾಟಲು ವಿಷಯ’ ಎಂದರು.’ನನ್ನ ಮೇಲೆ ಯಾವ ಉದ್ದೇಶಕ್ಕೆ ತನಿಖೆ ನಡೆಸುತ್ತಿದ್ದಾರೆಂದು ಗೊತ್ತಿಲ್ಲ. ನಿನ್ನೆ ಮೊನ್ನೆ ಆಗಿರುವ ದೂರು ಯಾವ ಆಧಾರದ ಮೇಲೆ ಕೊಟ್ಟಿದ್ದೀರಾ? ಮುಖ್ಯಮಂತ್ರಿಯವರು ತಮ್ಮ ಮನೆಗೆ ಯಾರನ್ನು ಕರೆಸಿಕೊಂಡಿದ್ದರೆಂಬುದು ಗೊತ್ತಿದೆ. ನಾನು ಏನಂತ ಆಣೆ ಮಾಡಬೇಕು. ನನ್ನ ಮನೆಗೆ ಬಂದು ಚೆಕ್ ಮಾಡೋಕೆ ಏನಿದೆ? ಎಂದು ಕಿಡಿಕಾರಿದರು.
