ಉದಯವಾಹಿನಿ, ಬೆಂಗಳೂರು: ಎಸ್ಎಸ್ಎಲ್ಸಿಯಲ್ಲಿ ಪದೇ-ಪದೇ ಫೇಲ್ ಆಗಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ದೇವಸ್ಥಾನದಲ್ಲಿದ್ದ ದೇವರ ವಿಗ್ರಹವನ್ನು ವಿರೂಪಗೊಳಿಸಿರುವ ಘಟನೆ ನಗರದಲ್ಲಿ ವರದಿಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪ್ರತಿಮೆ ವಿರೂಪಗೊಳಿಸಿದ ಬಾಲಕನನ್ನು ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕ ದೇವರ ಮೇಲೆ ನಂಬಿಕೆ ಇಟ್ಟಿದ್ದ.
ಲಕ್ಷ್ಮೀ ಭುವನೇಶ್ವರಿದೇವಿಯನ್ನು ನಿತ್ಯವೂ ಪೂಜಿಸುತ್ತಿದ್ದ. ತಾನು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕೆಂದು ಬೇಡಿಕೊಳ್ಳುತ್ತಿದ್ದ. ಆದರೆ, ಮೂರು ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಬಾಲಕ, ಪದೇ-ಪದೇ ಫೇಲ್ ಆಗಿದ್ದ. ತಾನು ಪೂಜೆ ಮಾಡಿದರೂ, ಬೇಡಿಕೊಂಡರೂ ಪಾಸಾಗಲು ಆಗಲಿಲ್ಲ. ದೇವರು ಕರುಣೆ ತೋರಿಲ್ಲವೆಂದು ಸಿಟ್ಟುಕೊಂಡು, ರಾತ್ರಿ ವೇಳೆ ದೇವಸ್ಥಾನದ ಬಳಿ ಹೋಗಿ, ವಿಗ್ರಹವನ್ನು ವಿರೂಪಗೊಳಿಸಿದ್ದಾನೆಂದು ತಿಳಿದುಬಂದಿದೆ. ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದಾಗ ಪ್ರತಿಮೆ ಧ್ವಂಸಗೊಂಡಿರುವುದು ಕಂಡು ಬಂದಿದೆ. ಬಳಿಕ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದು, ಬಳಿಕ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
