ಉದಯವಾಹಿನಿ, ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಬಳಿ ನೊರನಕ್ಕಿ ಗ್ರಾಮದ ನಿವಾಸಿ ಅಯ್ಯಪ್ಪ ಸೋಮವಾರ ತನ್ನ ಪತ್ನಿ ನಯನಾ(24) ಅವರನ್ನು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಳಿಗ್ಗೆ ಅಸ್ವಸ್ಥನಾಗಿದ್ದು ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.  ತಾಲ್ಲೂಕಿನ ದೊಡ್ಡೇರಿ ಕಾವಲು ಗ್ರಾಮದ ಮಹಿಳೆಯನ್ನು ಈತ ಮೂರು ವರ್ಷದ ಹಿಂದೆ ವಿವಾಹವಾಗಿದ್ದ. ದಂಪತಿಗೆ ಎರಡು ವರ್ಷದ ಗಂಡು ಮಗು ಇದೆ. ಕೊಲೆಯಾದ ನಯನಾ ಮೂರು ತಿಂಗಳ ಗರ್ಭಿಣಿ.  ವರದಕ್ಷಿಣೆ ಮತ್ತು ಒಡವೆ ತರುವಂತೆ ನಯನಾಗೆ ಪತಿ ಅಯ್ಯಪ್ಪ ಆಗಾಗ ಕಿರುಕುಳ ನೀಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆ ನಯನಾ, ತವರು ಮನೆಗೆ ಹೋಗಿದ್ದರು. ಕಳೆದ 17ರಂದು ಪತ್ನಿಯ ಮನೆಗೆ ತೆರಳಿದ ಅಯ್ಯಪ್ಪ, ಗ್ರಾಮಕ್ಕೆ ಕರೆ ತಂದಿದ್ದ. ಆಕೆಯನ್ನು ಗಂಡನೆ ಕೊಲೆ ಮಾಡಿದ್ದಾನೆ ಎಂದು ನಯನಾ ತಾಯಿ ಯಶೋದಮ್ಮ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸ್ಥಳಕ್ಕೆ ಡಿವೈಎಸ್ಪಿ ರವಿಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!