ಉದಯವಾಹಿನಿ, ಬೆಂಗಳೂರು: ಕಳೆದ ಹಲವು ದಿನಗಳಿಂದ ಗೊಂದಲದ ಗೂಡಾದ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕೈಬಿಟ್ಟ ಹಿನ್ನೆಲೆಯಲ್ಲಿ ರದ್ದಾಗಿರುವ ಕಾರ್ಡ್ಗಳನ್ನು ಸರಿಪಡಿಸಿಕೊಳ್ಳಲು ಪಡಿತರ ಚೀಟಿದಾರರು ಕೊರೆಯುವ ಚಳಿಯಲ್ಲೂ ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.
ಪಡಿತರ ಚೀಟಿ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದ್ದು, ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಷ್ಕರಣೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಬಿಟ್ಟಿದ್ದು, ಇನ್ನೊಂದು ವಾರದಲ್ಲಿ ರದ್ದಾಗಿರುವ ಕಾರ್ಡ್ಗಳನ್ನು ಮತ್ತೆ ಸರಿಪಡಿಸಲು ಸೂಚನೆ ನೀಡಿದ್ದು, ರದ್ದಾಗಿರುವ ಕಾರ್ಡ್ಗಳ ಪಟ್ಟಿ ಪಡೆದುಕೊಂಡು ಕಾರ್ಡ್ಗಳನ್ನು ಸರಿಪಡಿಸಲಾಗುತ್ತಿದೆ.
ಹೀಗಾಗಿ ದಾಖಲಾತಿಗಳನ್ನು ಕೈಯಲ್ಲಿ ಹಿಡಿದು ಕೊಂಡು ಫಲಾನುಭವಿಗಳು ನಮ ಕಾರ್ಡ್ ರದ್ದಾಗಿದೆಯೋ ಅಥವಾ ಚಾಲ್ತಿಯಲ್ಲಿದೆಯೋ? ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಒಂದು ವೇಳೆ ರದ್ದಾಗಿದ್ದರೆ ಸೇರ್ಪಡೆ ಮಾಡಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ವಿನಾಯಕ ನಗರದ ಸಿಂಗಾಪುರ ಮುಖ್ಯ ರಸ್ತೆಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಮೈ ಕೊರೆಯುವ ಚಳಿಯ ನಡುವೆಯೂ ಇಂದು ಬೆಳಿಗ್ಗೆ 4 ಗಂಟೆಗೆ ಫಲಾನುಭವಿಗಳು ದಾಖಲೆಗಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
